ಬೇಲೂರ (ಬಾದಾಮಿ): ವಿಶ್ವದಲ್ಲಿ ಭಾರತ ದೇಶವು ಶ್ರೀಮಂತ ಸಂಸ್ಕೃತಿಯ ಪರಂಪರೆಯನ್ನು ಹೊಂದಿದೆ. ನಮ್ಮ ಸಾಂಸ್ಕೃತಿಕ ಪರಂಪರೆಯ ಸ್ಮಾರಕಗಳನ್ನು ಉಳಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಇಂಟ್ಯಾಕ್ ಸಂಸ್ಥೆಯ ಹಿಂದಿನ ಸಂಚಾಲಕ ಡಾ. ಎಚ್.ಎಫ್ ಯೋಗಪ್ಪನವರ ಹೇಳಿದರು.
ಬೇಲೂರ ಗ್ರಾಮದ ಅನ್ನದಾನೇಶ್ವರ ಪದವಿ ಪೂರ್ವ ವಿದ್ಯಾಲಯದಲ್ಲಿ ಬುಧವಾರ ಬಾಗಲಕೋಟೆ ಘಟಕದ ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನ ನವದೆಹಲಿ (ಇಂಟ್ಯಾಕ್) ಆಶ್ರಯದಲ್ಲಿ ಪುಸ್ತಕಾವಲೋಕನ ಮತ್ತು ವಿದ್ಯಾರ್ಥಿಗಳಿಗೆ ಸ್ಮಾರಕ ವೀಕ್ಷಣೆ ಸಮಾರಂಭದಲ್ಲಿ ಅವರು ರಾಷ್ಟ್ರದ ಪರಂಪರೆಯ ಕುರಿತು ಅವರು ಮಾತನಾಡಿದರು.
ವಿಶ್ವದ 25 ರಾಷ್ಟ್ರಗಳಲ್ಲಿ 250ಕ್ಕೂ ಅಧಿಕ ಇಂಟ್ಯಾಕ್ ಸಂಸ್ಥೆಗಳು ಸ್ಮಾರಕಗಳ ಸಂರಕ್ಷಣೆ ಕುರಿತು ಜನರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸುರೇಖಾ ಕುಲಕರ್ಣಿ ಅವರು ಬರೆದ ಕಲ್ಯಾಣಿ ಚಾಲುಕ್ಯರ ರಾಣಿ ಅಕ್ಕಾದೇವಿ ಕಾಬಂಬರಿ ಕುರಿತು ಉಪನ್ಯಾಸಕಿ ಕವಿತಾ ಜಂಗವಾಡ ಪುಸ್ತಕಾವಲೋಕನ ಮಾಡಿದರು.
ಕಾದಂಬರಿಗಾರ್ತಿ ಸುರೇಖಾ ಕುಲಕರ್ಣಿ ಮಾತನಾಡಿ, ‘ರಾಣಿ ಅಕ್ಕಾದೇವಿಯ ಇತಿಹಾಸವನ್ನು ಜನರು ಮತ್ತು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಸ್ಮಾರಕವನ್ನು ರಕ್ಷಿಸಬೇಕು’ ಎಂದರು.
ಡಾ.ಎಸ್.ಐ, ಪತ್ತಾರ, ಎಂ.ಡಿ. ಯಲಿಗಾರ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಂ.ಎನ್. ನಿಲುಗಲ್, ಮುಖ್ಯ ಶಿಕ್ಷಕ ಎಸ್.ಬಿ. ಕುಸಬಿ. ವಿ.ಕೆ. ಶಿವಪ್ಪಯ್ಯನಮಠ, ಇಂಟ್ಯಾಕ್ ಸಂಸ್ಥೆಯ ಸದಸ್ಯರು ಇದ್ದರು. ಎಂ.ಎಫ್. ಕುರಿ ಸ್ವಾಗತಿಸಿದರು. ಇಂಟ್ಯಾಕ್ ಸಂಚಾಲಕ ಡಿ.ಜಿ. ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೈ.ಕೆ. ಐಹೊಳ್ಳಿ ನಿರೂಪಿಸಿದರು. ಎ. ರಾಮಚಂದ್ರಪ್ಪ ವಂದಿಸಿದರು.
ಕಾಲೇಜಿನ ವಿದ್ಯಾರ್ಥಿಗಳು ಗ್ರಾಮದಲ್ಲಿ ಸ್ಮಾರಕ ಉಳಿಸಿ ಜನಜಾಗೃತಿ ಜಾಥಾ ಕೈಗೊಂಡು ತ್ರೈಪುರುಷ ದೇವಾಲಯಕ್ಕೆ ತೆರಳಿ ವೀಕ್ಷಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.