ಕೊಟ್ಟೂರು: ಒಳ ಪಂಗಡಗಳನ್ನು ಮರೆತು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿದಾಗ ಮಾತ್ರ ವೀರಶೈವ ಸಮಾಜ ಪ್ರಗತಿ ಹೊಂದಲು ಸಾಧ್ಯ ಎಂದು ಹಿರೇಮಲ್ಲನಕೇರಿ ಮಠದ ಚನ್ನಬಸವ ಸ್ವಾಮೀಜಿ ಅಭಿಪ್ರಾಯ ಪಟ್ಟರು.ಪಟ್ಟಣದ ಮಹಲ್ ಮಠದಲ್ಲಿ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಸಹಯೋಗದೊಂದಿಗೆ ಗುರುವಾರ ಏರ್ಪಡಿಸಿದ್ದ ಹಾನಗಲ್ ಕುಮಾರಸ್ವಾಮಿಗಳ 150ನೇ ಜಯಂತಿಯಲ್ಲಿ ಮಾತನಾಡಿ, ಲಿಂ. ಶಿವಕುಮಾರ ಮಹಾಸ್ವಾಮಿಗಳು ವೀರಶೈವ ಸಮಾಜದ ಉನ್ನತಿಗಾಗಿ ಶಿವಯೋಗಿ ಮಂದಿರವನ್ನು ಸ್ಥಾಪಿಸಿ ಅಸಂಖ್ಯಾತ ಶಿವಾಚಾರ್ಯರನ್ನು ನಾಡಿಗೆ ನೀಡಿದಂತಹ ಕೊಡುಗೆ ಇವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಚಾನುಕೋಟಿಮಠದ ಡಾ.ಸಿದ್ಧಲಿಂಗ ಶಿವಾಚಾರ್ಯರು ಮಾತನಾಡಿ, ವೀರಶೈವರು ಆತ್ಮಾವಲೋಕನ ಮಾಡಿಕೊಳ್ಳುವಂತಹ ಸಂದರ್ಭ ಇದಾಗಿದ್ದು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ವೀರಶೈವ ಧರ್ಮದ ಬೆಳವಣಿಗೆಗೆ ಸಮಾಜದ ಎಲ್ಲ ಪಂಗಡಗಳು ಒಟ್ಟಾಗಿ ಶ್ರಮಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಲ್ ಮಠದ ಶಂಕರಸ್ವಾಮಿ, ಕೊಟ್ಟೂರುಸ್ವಾಮಿ, ಅ.ಭಾ.ವಿ.ಮಹಾಸಭಾ ತಾಲ್ಲೂಕು ಘಟಕಾಧ್ಯಕ್ಷ ಎ.ಎಚ್.ಎಂ.ಷಡಾಕ್ಷರಯ್ಯ, ಅಂಚೆ ಇಲಾಖೆಯ ನಿವೃತ್ತ ನೌಕರ ದೇವರಮನಿ ಕರಿಯಪ್ಪ ಅವರು ಮತನಾಡಿದರು.ಮುಖಂಡರಾದ ಆರ್.ಎಂ. ಗುರುಸ್ವಾಮಿ, ಬೇಲಿಗೌಡ್ರು ಸೋಮಣ್ಣ, ದೇವರಮನಿ ಕೊಟ್ರೇಶ್, ಬಿ.ಎಂ.ಕೊಟ್ರೇಶ್, ಸಕ್ರಿಗೌಡ್ರು, ಬನ್ನೇಣ್ಣ, ಅಯ್ಯನಹಳ್ಳಿ ನಾಗರಾಜ, ಕೆಂಪಳ್ಳಿಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.