ಕೂಡ್ಲಿಗಿ: ‘ಜನರ ಸೇವೆಗಾಗಿಯೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಲಸ ನಿರ್ವಹಿಸುತ್ತಿದ್ದು ಸಂಸ್ಥೆಯ ಬಸ್ಸುಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು’ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಜಿ. ಸಿದ್ದೇಶ್ ಹೇಳಿದರು. ಅವರು ಪಟ್ಟಣದ ಸಾರಿಗೆ ಘಟಕದಲ್ಲಿ ಸೋಮವಾರ ಕೂಡ್ಲಿಗಿ–ಬೆಂಗಳೂರು ನೂತನ ಮಾರ್ಗಕ್ಕೆ ಚಾಲನೆ ನೀಡಿ ಮಾತನಾಡಿದರು.
‘ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿರುವ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೀಡುವ ಕಾರ್ಯವನ್ನು ಸಂಸ್ಥೆಯಿಂದ ಪಂಚಾಯಿತಿಯಲ್ಲಿ ನಡೆಸಲಾಗುತ್ತಿದೆ. ಈಗಾಗಲೇ ಸಾವಿರಾರು ಜನರಿಗೆ ಗುರುತಿನ ಚೀಟಿ ನೀಡಲಾಗಿದೆ. ಉಳಿದ ಹಿರಿಯ ನಾಗರಿಕರು ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ಘಟಕದ ವ್ಯವಸ್ಥಾಪಕ ಪ್ರದೀಪ್ ಮಾತನಾಡಿ, ತಾಲ್ಲೂಕಿನ ಗುಡೇಕೋಟೆ ಮಾರ್ಗವಾಗಿ ಬೆಂಗಳೂರಿಗೆ ಬಸ್ ಬಿಡುವಂತೆ ಈ ಭಾಗದ ಜನರ ಬಹುದಿನದ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ. ಹೊಸಪೇಟೆಯಿಂದ ಹೊರಡುವ ಬಸ್ ರಾತ್ರಿ 9.30ಕ್ಕೆ ಕೂಡ್ಲಿಗಿಗೆ, ಗುಡೇಕೋಟೆ, ಮೊಳಕಾಲ್ಮುರು, ಚಳ್ಳಕೆರೆ ಮಾರ್ಗವಾಗಿ ಮರುದಿನ ಬೆಳಿಗ್ಗೆ 5.30ಕ್ಕೆ ಬೆಂಗಳೂರು ಸೇರಲಿದೆ.
ಮತ್ತೆ ಅಲ್ಲಿಂದ ಸಂಜೆ 5.30ಕ್ಕೆ ಬೆಂಗಳೂರು ಬಿಟ್ಟು ರಾತ್ರಿ 12.30ಕ್ಕೆ ಕೂಡ್ಲಿಗಿ ಮಾರ್ಗವಾಗಿ ಹೊಸಪೇಟೆಗೆ ತಲುಪಲಿದೆ’ ಎಂದು ವಿವರಿಸಿದರು. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ದೇವಮನೆ ಮಹೇಶ್, ವಕೀಲ ಗಿರೀಶ್, ಕಾಂಗ್ರೆಸ್ ಮುಖಂಡ ಬಿ. ಶಾಂತಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.