ADVERTISEMENT

‘ರೈತರು ಆತ್ಮಹತ್ಯೆ ದಾರಿ ಹಿಡಿಯದಿರಿ’

‘ಸಮಗ್ರ ಕೃಷಿ ಅಭಿಯಾನ’ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 14:04 IST
Last Updated 4 ಜುಲೈ 2018, 14:04 IST
ಸಮಗ್ರ ಕೃಷಿ ಅಭಿಯಾನವನ್ನು ಭಾರತಿ ಉದ್ಘಾಟಿಸಿದರು ಲಕ್ಷ್ಮೀನಾರಾಯಣಪ್ಪ ಇದ್ದರು
ಸಮಗ್ರ ಕೃಷಿ ಅಭಿಯಾನವನ್ನು ಭಾರತಿ ಉದ್ಘಾಟಿಸಿದರು ಲಕ್ಷ್ಮೀನಾರಾಯಣಪ್ಪ ಇದ್ದರು   

ವಿಜಯಪುರ: ಕೃಷಿ, ತೋಟಗಾರಿಕೆಯಲ್ಲಿಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಉತ್ತಮ ಇಳುವರಿ ಸಾಧ್ಯ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಹೇಳಿದರು.

ಚನ್ನರಾಯಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ‘ಸಮಗ್ರ ಕೃಷಿ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಲಾಖೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದು ಅನುಷ್ಠಾನ ಮಾಡಿಕೊಂಡು ರೈತರು ಸಫಲರಾಗಬೇಕು. ಬೆಲೆ ಕಡಿಮೆ, ಸರಿಯಾಗಿ ಬೆಳೆ ಬಂದಿಲ್ಲ ಎಂದು ಆತ್ಮಹತ್ಯೆಯ ದಾರಿ ಹಿಡಿಯಬಾರದು. ಒಮ್ಮೆ ಹೋದ ಜೀವ ಮತ್ತೆ ವಾಪಸ್‌ ಬರುವುದಿಲ್ಲ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀನಾರಾಯಣಪ್ಪ ಮಾತನಾಡಿ,ಕಡಿಮೆ ಮಂದಿ ಇದ್ದರೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ರೈತರು ಕೇವಲ ಕುಷ್ಕಿ ಬೆಳೆಗಳು ಮಾತ್ರವಲ್ಲದೆ ಎಣ್ಣೆಕಾಳು ಬೆಳೆಯುವ ಕಡೆಗೂ ರೈತರು ಗಮನಹರಿಸಬೇಕು. ಮುಂದಿನ 6 ತಿಂಗಳಲ್ಲಿ ಎಲ್ಲಾ ಕೆರೆಗಳಿಗೂ ನೀರು ಹರಿಯಲಿದ್ದು, ನೀರು ಶೇಖರಣೆ ಮಾಡಿಟ್ಟುಕೊಳ್ಳಲು ಅಗತ್ಯವಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದರು.

ADVERTISEMENT

ತೋಟಗಾರಿಕೆ ಇಲಾಖೆ: ನರೇಗಾ ಯೋಜನೆ ಅಡಿ ಬೆಳೆಯುವ ಬಹುವಾರ್ಷಿಕ ಬೆಳೆಗಳಿಗೆ ಸಹಾಯಧನ ನೀಡಲಾಗುತ್ತದೆ. ಫಲಾನುಭವಿಗಳು ಉದ್ಯೋಗ ಕಾರ್ಡ್, ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ‌‌ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಾಗಿರಬೇಕು; ಸಣ್ಣ ರೈತರಾಗಿರಬೇಕು. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಶೇ 90 ರಷ್ಟು ಸಹಾಯಧನ ದೊರೆಯಲಿದೆ. ಖರೀದಿ ಮಾಡುವ ಎಲ್ಲ ವಸ್ತುಗಳು ಐಎಸ್ಐ ಮಾರ್ಕ್ ಹೊಂದಿರಬೇಕು ಎಂದರು.

‘ಕೆಲಸ ಆರಂಭಿಸಲು ನಮ್ಮಿಂದ ಅನುಮತಿ ಪಡೆದಿರಬೇಕು. ಕೃಷಿ ಭಾಗ್ಯ ಯೋಜನೆಯಡಿ ಪಾಲಿಹೌಸ್‌ಗಳನ್ನೂ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ. ಆರ್‌ಕೆವಿವೈ ಯೋಜನೆಯಡಿ ಮಿನಿ ಟ್ರ್ಯಾಕ್ಟರ್, ಪಂಪು, ಖರೀದಿ ಮಾಡಬಹುದು. ಇತರೆ ರೈತರಿಗೆ ಶೇ 50 ರಷ್ಟು ಸಹಾಯಧನ, ಪರಿಶಿಷ್ಟ ಜಾತಿ, ಪಂಗಡದ ರೈತರಿಗೆ ಶೇ 90 ರಷ್ಟು ಸಹಾಯಧನ ಸಿಗಲಿದೆ. ತರಕಾರಿ ಬೆಳೆಯಲು 1 ಎಕರೆಗೆ ₹18 ಸಾವಿರ ಸಹಾಯಧನ ಸಿಗಲಿದೆ. ಎನ್‌ಎಚ್ಎಂ ನಲ್ಲಿ ಮಿನಿ ಟ್ರ್ಯಾಕ್ಟರ್ ಖರೀದಿ, ಕೃಷಿ ಹೊಂಡ ನಿರ್ಮಾಣ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ರಾಜೇಂದ್ರ ಮಾಹಿತಿ ನೀಡಿದರು.

ವಿಜ್ಞಾನಿ ಡಾ. ಮಂಜುನಾಥ್, ಬೆಳೆಗಳಿಗೆ ಬೀಳುವ ರೋಗಗಳ ಹತೋಟಿ ಹಾಗೂ ಮಣ್ಣು ಹಾಗೂ ನೀರಿನ ಪರೀಕ್ಷೆಗಳ ಕುರಿತು ಮಾಹಿತಿ ನೀಡಿದರು. ವಿವಿಧ ತಳಿಗಳ ಬಿತ್ತನೆ ಬೀಜಗಳು, ಕೃಷಿ ಉಪಕರಣಗಳ ಪ್ರದರ್ಶನ ನಡೆಯಿತು. ಪರಿವರ್ತನಾ ಕಲಾ ಸಂಸ್ಥೆಯಿಂದ ಸರ್ಕಾರದ ಯೋಜನೆಗಳ ಕುರಿತು ಬೀದಿ ನಾಟಕ ಪ್ರದರ್ಶನ ನಡೆಯಿತು. ಕೃಷಿ ಅಧಿಕಾರಿ ಮಣಿಲ, ಕೃಷಿ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಮಾತನಾಡಿದರು. ಅಧಿಕಾರಿಗಳು ಇಲಾಖಾವಾರು ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಮ್ಮ, ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಾವಿತ್ರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ವೆಂಕಟೇಶ್, ಶಶಿಕಲಾ, ಮಂಜುನಾಥ್, ಮುಖಂಡರಾದ ಸಿ.ಕೆ. ರಾಮಚಂದ್ರಪ್ಪ, ರೈತ ಬೀಡಿಗಾನಹಳ್ಳಿ ಮಂಜುನಾಥ್, ರೇಷ್ಮೆ ಇಲಾಖೆ ಎಸ್.ಇ.ಒ ನರೇಂದ್ರಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.