ADVERTISEMENT

ಬಿಜೆಪಿ ವಿರುದ್ಧ ಅವಿಶ್ವಾಸಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 9:11 IST
Last Updated 23 ಜುಲೈ 2017, 9:11 IST

ಚನ್ನಮ್ಮನ ಕಿತ್ತೂರು: ಬಿಜೆಪಿಯಿಂದ ಆಯ್ಕೆಯಾಗಿರುವ ಸ್ಥಳೀಯ ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಕಿರಣ ಪಾಟೀಲ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ನಿರ್ಧರಿಸಲಾಗಿದ್ದು, ಕೂಡಲೇ ಸಭೆ ಕರೆಯುವಂತೆ ಅಧ್ಯಕ್ಷ ಮಹಮ್ಮದ ಹನೀಫ್ ಸುತಗಟ್ಟಿ ಅವರನ್ನು 12 ಜನ ಸದಸ್ಯರು ಕೋರಿದ್ದಾರೆ.

ಶನಿವಾರ ಈ ಬಗ್ಗೆ ಸದಸ್ಯರು ಅಧ್ಯಕ್ಷರಿಗೆ ಪತ್ರ ನೀಡಿದ್ದು, ಕರ್ನಾಟಕ ಪುರಸಭೆ ಕಾಯ್ದೆ 1964 ಕಲಂ 42ರ ಪ್ರಕಾರ ಅವಿಶ್ವಾಸ ನಿರ್ಣಯ ಮಂಡಿ ಸಲು ಸಭೆ ಕರೆಯಬೇಕು ಎಂದು ಅವರು ಮನವಿ ಮಾಡಿದರು.

ಅಧ್ಯಕ್ಷ ಸುತಗಟ್ಟಿ ಸೇರಿದಂತೆ ಸದಸ್ಯರಾದ ಆಶ್ಫಾಕ್ ಹವಾಲ್ದಾರ್, ಮುಸ್ತಾಕ ಸುತಗಟ್ಟಿ, ಬಾಬಾಸಾಹೇಬ ಜಮಾದಾರ, ವಿಠ್ಠಲ ಭಜಂತ್ರಿ, ಕಿರಣ ವಾಳದ, ನೀತಾ ಶೆಟ್ಟರ್,ರಾಧಿಕಾ ಡವಳೆ, ಶೋಭಾ ಬೇಳೂರ, ಕೃಷ್ಣಾ ಬಾಳೇಕುಂದರಗಿ, ಶೋಭಾ ದರ್ಶಿ, ಮಹಾಂತೇಶ ನಾಗೋಜಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ADVERTISEMENT

ಇತ್ತೀಚಿಗೆ ಬಿಜೆಪಿ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಿದ್ದ ಮಹಮ್ಮದ ಹನೀಫ್ ಸುತಗಟ್ಟಿ ಅವರ ವಿರುದ್ಧ ಬಿಜೆಪಿ ಉಪಾಧ್ಯಕ್ಷ ಕಿರಣ ಪಾಟೀಲ ನೇತೃತ್ವದಲ್ಲಿ ಅವಿಶ್ವಾಸ ಮಂಡಿಸಿ ಗೆಲುವು ಪಡೆಯುವಲ್ಲಿ ವಿಫಲರಾಗಿದ್ದರು.

ಇದಾದ ಕೆಲವೇ ದಿನಗಳ ನಂತರ ಉಪಾಧ್ಯಕ್ಷ ಪಾಟೀಲ ವಿರುದ್ಧವೇ ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷ ಸ್ಥಾನ ಭದ್ರ ಪಡಿಸಿಕೊಂಡಿರುವ ಪಕ್ಷೇತರ ಅಭ್ಯರ್ಥಿ ಸುತಗಟ್ಟಿ ನೇತೃತ್ವದಲ್ಲಿ ಅವಿಶ್ವಾಸ ಮಂಡನೆಗೆ ದಿನಾಂಕ ನಿಗದಿ ಪಡಿಸಬೇಕು ಎಂದು ಕೋರಿರುವುದು ಅಚ್ಚರಿಯ ರಾಜಕೀಯ ಬೆಳವಣಿಗೆಗೆ ಕಾರಣವಾಗಿದೆ. ಜಮಾದಾರ ಸ್ಥಾಯಿ ಸಮಿತಿ ಅಧ್ಯಕ್ಷ

ಚನ್ನಮ್ಮನ ಕಿತ್ತೂರು: ಕಿತ್ತೂರು ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿಯನ್ನು ಶನಿವಾರ ರಚನೆ ಮಾಡಲಾ ಗಿದ್ದು, ಅಧ್ಯಕ್ಷರಾಗಿ ಬಾಬುಸಾಬ್ ಜಮಾದಾರ ಅವಿರೋಧವಾಗಿ ಆಯ್ಕೆಯಾದರು. ಮುಖ್ಯಾಧಿಕಾರಿ ಐ. ಕೆ. ಗುಡದಾರಿ ರಚನೆಯ ಪ್ರಕ್ರಿಯೆ ನಡೆಸಿಕೊಟ್ಟರು. ಸಮಿತಿಯ ಸದಸ್ಯರು ಹೀಗಿದ್ದಾರೆ ಆಶ್ಫಾಕ್ ಹವಾಲ್ದಾರ್, ರಾಧಿಕಾ ಡವಳೆ, ನೀತಾ ಶೆಟ್ಟರ್, ಶೋಭಾದರ್ಶಿ, ಕೃಷ್ಣಾ ಬಾಳೇಕುಂದರಗಿ, ಕಿರಣ ವಾಳದ, ನಾಗೇಶ ಸೊಂಟಕ್ಕಿ, ಮಹಾಂತೇಶ ನಾಗೋಜಿ, ಶೋಭಾ ಬೇಳೂರ ಹಾಗೂ ವಿಠ್ಠಲ ಭಜಂತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.