ADVERTISEMENT

‘ಹೊಂಡ’ದಲ್ಲಿನ ಅವಶೇಷ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 5:49 IST
Last Updated 11 ಸೆಪ್ಟೆಂಬರ್ 2017, 5:49 IST
ಬೆಳಗಾವಿಯ ಕಪಿಲೇಶ್ವರದಲ್ಲಿ ಗಣೇಶ ಮೂರ್ತಿಗಳ ಅವಶೇಷಗಳು ಬಿದ್ದಿವೆ
ಬೆಳಗಾವಿಯ ಕಪಿಲೇಶ್ವರದಲ್ಲಿ ಗಣೇಶ ಮೂರ್ತಿಗಳ ಅವಶೇಷಗಳು ಬಿದ್ದಿವೆ   

ಬೆಳಗಾವಿ: ನಗರದಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿರುವ ಹೊಂಡಗಳಲ್ಲಿ ಸಂಗ್ರಹವಾಗಿರುವ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಹೊಂಡಗಳಲ್ಲಿ ತುಂಬಿದ್ದ ನೀರನ್ನೂ ಖಾಲಿ ಮಾಡುವ ಮೂಲಕ, ಪರಿಸರ ಮಾಲಿನ್ಯ ತಡೆಗಟ್ಟಲು ಪಾಲಿಕೆ ಮುಂದಾಗಿದೆ.

ಇಲ್ಲಿ ಆರು ಪ್ರಮುಖ ಬೃಹತ್‌ ಹೊಂಡಗಳಿವೆ. ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಪ್ರತಿಷ್ಠಾಪಿಸಿದ್ದ ದೊಡ್ಡ ಪ್ರಮಾಣದ ಮೂರ್ತಿಗಳ ವಿಸರ್ಜನೆಯನ್ನು ಈ ಹೊಂಡಗಳಲ್ಲಿ ಮಾಡಲಾಗಿತ್ತು. ಕಪಿಲೇಶ್ವರ ದೇವಸ್ಥಾನ ಬಳಿಯ ಹಳೆಯ ಮತ್ತು ಹೊಸ ಹೊಂಡಗಳು, ಜಕ್ಕೇರಿ ಹೊಂಡ, ವಡಗಾವಿ, ಕಣಬರಗಿ ಬಳಿಯ ಹೊಂಡಗಳಲ್ಲಿ ಹೆಚ್ಚಿನ ಮೂರ್ತಿಗಳನ್ನು ವಿಸರ್ಜಿಸಲಾಗಿದೆ.

ಅಲ್ಲಿರುವ ಕರಗಿದ ಹಾಗೂ ಕರಗದ ಗಣೇಶ ಮೂರ್ತಿಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ತುಂಬಿಕೊಂಡು ದೂರದ ಖಾಲಿ ಜಾಗಗಳಿಗೆ ಸುರಿಯುವ ಪ್ರಕ್ರಿಯೆ ಭಾನುವಾರದಿಂದ ಆರಂಭ ವಾಗಿದೆ. ಪಾಲಿಕೆ ಸಿಬ್ಬಂದಿ ಈಗ ಹೊಂಡಗಳ ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿದ್ದಾರೆ.

ADVERTISEMENT

ಗಣೇಶ ಉತ್ಸವ ಈ ವರ್ಷ ಹನ್ನೆರಡು ದಿನ ಸಂಭ್ರಮದಿಂದ ಮುಕ್ತಾಯಗೊಂಡಿದೆ. ಬರದಲ್ಲಿಯೂ ಕೊರತೆ ಇಲ್ಲದಂತೆ ವಿಜೃಂಭಿಸಿದ ಗಣೇಶೋತ್ಸವದಲ್ಲಿ ಆಕರ್ಷಕ ಮೂರ್ತಿಗಳು ರಾಜ್ಯ, ನೆರೆ ರಾಜ್ಯಗಳ ಜನರನ್ನು ತಮ್ಮತ್ತ ಸೆಳೆದಿದ್ದವು. ಆದ್ದರಿಂದಲೇ ಇಲ್ಲಿಯ ಗಣೇಶ ಹಬ್ಬ ರಾಜ್ಯದಲ್ಲಿಯೇ ಪ್ರಸಿದ್ಧವಾಗಿದೆ.

ಆತಂಕ ನಿವಾರಣೆಗೆ: ಈಗ ಮಾಲಿನ್ಯದ ಆತಂಕ ಕಾಡಿದೆ. ಅನೇಕ ನಮೂನೆಯ, ವಿಷಕಾರಿ ರಸಾಯನಿಕ ಬಣ್ಣಗಳಿಂದ ಸಿಂಗಾರಗೊಂಡಿದ್ದ ಮೂರ್ತಿಗಳನ್ನು ವಿಸರ್ಜಿಸಲಾಗಿರುವ ಹೊಂಡಗಳ ಸುತ್ತಲಿನ ಪ್ರದೇಶದಲ್ಲಿ ಜಲ ಮತ್ತು ವಾಯು ಮಾಲಿನ್ಯಕ್ಕೆ ಎಡೆಯಾಗ ಬಹುದು ಎಂಬ ಆತಂಕ ಮೂಡಿಸಿದೆ. ಈ ಆತಂಕ ನಿವಾರಣೆಗೆ ಕ್ರಮ ವಹಿಸಲಾಗಿದೆ.

ಪರಿಸರಕ್ಕೆ ಧಕ್ಕೆ ಬರಬಾರದು ಎಂದು ಉತ್ಸವದ ಮೊದಲೇ ಪ್ಲ್ಯಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ತಯಾರಿಸಬಾರದು. ಮಣ್ಣಿನಿಂದ ಮೂರ್ತಿ ತಯಾರಿಸಬೇಕು ಮತ್ತು ಮಣ್ಣಿನ ಮೂರ್ತಿಗಳನ್ನು ಮಾತ್ರ ತರಬೇಕು ಎಂದು ನಿರ್ಬಂಧ ಹೇರ ಲಾಗಿತ್ತು. ಆದರೆ ಈ ನಿರ್ಬಂಧಗಳನ್ನು ಅನೇಕರು ಪಾಲಿಸಿಲ್ಲ. ಆದ್ದರಿಂದ ಹೊಂಡಗಳಲ್ಲಿ ಈಗ ಗಣೇಶ ಮೂರ್ತಿ ಗಳು ಅವಶೇಷಗಳ ದರ್ಶನವಾಗುತ್ತಿದೆ.

ಪರಿಸರ ಹಾಗೂ ಆರೋಗ್ಯ ಅನುಕೂಲಕ್ಕಾಗಿ ಪಿಒಪಿ ಗಣೇಶ ಮೂರ್ತಿಗಳು ಇರಬಾರದಿತ್ತು. ಅಧಿಕಾರಿಗಳೂ ಈ ವರ್ಷ ಮೂರ್ತಿ ಗಳೆಲ್ಲ ಮಣ್ಣಿನಲ್ಲಿವೆ ಎಂದೇ ಭಾವಿಸಿದ್ದರು. ಈಗ ಹೊಂಡಗಳಲ್ಲಿ ಗೋಚರಿ ಸುವ ಮೂರ್ತಿಗಳ ಅವಶೇಷಗಳು, ಅವು ಮಣ್ಣಿನ ಮೂರ್ತಿಗಳಲ್ಲ ಎನ್ನುವುದನ್ನು ತೋರಿಸುತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಹೊಂಡಗಳಲ್ಲಿ ವಿಸರ್ಜಿಸಲಾಗಿ ರುವ ಬಹುತೇಕ ಬೃಹತ್‌ ಗಣೇಶ ಮೂರ್ತಿಗಳು ಕರಗಿಲ್ಲ. ಒಂದೊಂದೇ ಅವಶೇಷಗಳನ್ನು ಮುರಿದು ಟ್ರ್ಯಾಕ್ಟರ್‌ ನಲ್ಲಿ ತುಂಬಲಾಗುತ್ತಿದೆ.
‘ಇಷ್ಟು ದಿನ ಪೂಜಿಸಿದ್ದ ಮೂರ್ತಿ ಗಳನ್ನು ಈಗ ಈ ರೀತಿ ಹಾಕುತ್ತಿರು ವುದಕ್ಕೆ ನೋವಾಗುತ್ತಿದೆ.  ಆದರೆ, ಹೊಂಡಗಳನ್ನು ಸ್ವಚ್ಛಗೊಳಿಸ ಬೇಕಲ್ಲವೇ’ ಎಂದು ಸ್ವಚ್ಛತಾ ಸಿಬ್ಬಂದಿ ಮಲ್ಲೇಶಿ ಚವಾಣ ಹೇಳಿದರು.

‘ಹೊಂಡಗಳಲ್ಲಿ ವಿಸರ್ಜಿಸಿದ್ದ ಬಹುತೇಕ ಮೂರ್ತಿಗಳು ಕರಗಿವೆ. ಹೊಂಡಗಳಲ್ಲಿನ ತ್ಯಾಜ್ಯ ಮತ್ತು ನೀರನ್ನು ಖಾಲಿ ಮಾಡಲಾಗುತ್ತಿದೆ. ಪರಿಸರ ಮಾಲಿನ್ಯ ಆಗದಂತೆ ನೋಡಿ ಕೊಳ್ಳಲಾಗುವುದು’ ಎಂದು ಪಾಲಿಕೆ ಪರಿಸರ ಅಧಿಕಾರಿ ಉದಯಕುಮಾರ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.