ಬೆಂಗಳೂರು: ಈಜಿಪುರದಲ್ಲಿ ಮನೆ ಕುಸಿದ ವೇಳೆ ಗಾಯಗೊಂಡು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಜನಾ (3) ಎಂಬ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಅಸುನೀಗಿದಳು.
‘ಬಾಲಕಿಗೆ ಶೇ 60ರಷ್ಟು ಸುಟ್ಟಗಾಯಗಳಾಗಿತ್ತು. ಮಕ್ಕಳಿಗೆ ಈ ಪ್ರಮಾಣದ ಗಾಯಗಳಾದರೆ ಚೇತರಿಸಿಕೊಳ್ಳುವುದು ಕಷ್ಟಸಾಧ್ಯ. ಆಕೆ ಎರಡು ದಿನಗಳಿಂದ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಳು. ಆದರೆ, ಗುರುವಾರ ಆಕೆಯ ಸ್ಥಿತಿ ಗಂಭೀರವಾಗಿತ್ತು. ಸಂಜೆ 4.30ರ ಸುಮಾರಿಗೆ ಮೃತಪಟ್ಟಳು. ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ಮಾಡಲಾಗುತ್ತದೆ’ ಎಂದು ಪ್ಲಾಸ್ಟಿಕ್ ಸರ್ಜರಿ ಮತ್ತು ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ ಡಾ.ಕೆ.ಟಿ.ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಘಟನೆಯಲ್ಲಿ ಜಾನಕಿ (45) ಎಂಬುವರು ಶೇ 25ರಷ್ಟು ಹಾಗೂ ದಿಲೀಪ್ (17) ಎಂಬುವರು ಶೇ 15ರಷ್ಟು ಗಾಯಗೊಂಡಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ’ ಎಂದರು.
₹5 ಲಕ್ಷ ಪರಿಹಾರ:
‘ಸಂಜನಾ ಸಂಬಂಧಿಕರಿಗೆ ₹5 ಲಕ್ಷ ಪರಿಹಾರ ನೀಡುತ್ತೇವೆ’ ಎಂದು ಮೇಯರ್ ಆರ್.ಸಂಪತ್ ರಾಜ್ ತಿಳಿಸಿದರು.
ಆರೋಗ್ಯ ವಿಚಾರಿಸಿದ್ದ ಗೃಹ ಸಚಿವ: ವಿಕ್ಟೋರಿಯಾ ಆಸ್ಪತ್ರೆಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ್ದ ಗೃಹ ಸಚಿವ ರಾಮಲಿಂಗಾರೆಡ್ಡಿ ಬಾಲಕಿಯ ಆರೋಗ್ಯ ವಿಚಾರಿಸಿದ್ದರು. ವಿಶೇಷ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದರು.
ಕಳೆದ ಮಂಗಳವಾರ ಎರಡು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಅಸುನೀಗಿದ್ದರು. ಸಂಜನಾಳ ತಂದೆ ಸರವಣ, ತಾಯಿ ಅಶ್ವಿನಿ ಸಹ ಮೃತಪಟ್ಟಿದ್ದರು. ಐವರು ಗಾಯಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.