ಬೆಂಗಳೂರು: ಮದ್ಯವ್ಯಸನದಿಂದ ಮುಕ್ತವಾಗಲು ಹೊನ್ನಾಳಿ ತಾಲ್ಲೂಕು ಸೂರಗೊಂಡನಕೊಪ್ಪದಲ್ಲಿರುವ ಸಂತ ಸೇವಾಲಾಲ್ ಜನ್ಮಸ್ಥಳಕ್ಕೆ ಬರುವವರಿಗೆ ಆಯುರ್ವೇದ ಮತ್ತು ಇತರ ಆಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸಲು ‘ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ’ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಪ್ರತಿಷ್ಠಾನದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ವ್ಯಸನ ಮುಕ್ತರಾಗಲು ಬರುವವರಿಗೆ ಕೆಲವು ಆಚರಣೆಗಳು ಮತ್ತು ಮನೋಸ್ಥೈರ್ಯ ನೀಡುವ ಚಿಕಿತ್ಸೆ ಇದೆ. ಆದರೆ, ದುರ್ಬಲ ಮನಸ್ಸಿನವರಿಗೆ ಹಾಲಿ ಇರುವ ಚಿಕಿತ್ಸಾ ವಿಧಾನದಿಂದ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ಆಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮದ್ಯಪಾನ ಸಂಯಮ ಮಂಡಳಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದ ಸಹಯೋಗದಲ್ಲಿ ಮದ್ಯ ವ್ಯಸನ ನಿವಾರಣೆ ಹಾಗೂ ಚಿಕಿತ್ಸಾ ಕುಟೀರಗಳನ್ನು ನಿರ್ಮಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ಸಂತ ಸೇವಾಲಾಲರ ಜನ್ಮಕ್ಷೇತ್ರಕ್ಕೆ ಹೊಂದಿಕೊಂಡಂತೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ದಾನವಾಗಿ ನೀಡಲಾಗಿರುವ 20 ಎಕರೆ ಜಮೀನಿನಲ್ಲಿ ಕೈಗಾರಿಕಾ ತರಬೇತಿ ಸಂಸ್ಥೆ ಸ್ಥಾಪಿಸಲು ಸರ್ಕಾರ ಮಂಜೂರಾತಿ ನೀಡಿದೆ. ಜೊತೆಗೆ ವಲಸೆ ಪ್ರವೃತ್ತಿಯ ಕುಟುಂಬಗಳ ಮಕ್ಕಳಿಗೆ ಇಲ್ಲಿ ಮೊರಾರ್ಜಿ ವಸತಿ ಶಾಲೆ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಪ್ರತಿಷ್ಠಾನಕ್ಕೆ ಸರ್ಕಾರ ₹ 5 ಕೋಟಿ ಅನುದಾನ ಒದಗಿಸಿದೆ. ಈಗಾಗಲೇ ರೂಪಿಸಿರುವ ಕ್ರಿಯಾ ಯೋಜನೆ ಬಗ್ಗೆಯೂ ಸಮಾಲೋಚನೆ ನಡೆಯಿತು. ಎಲ್ಲ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದರು.
ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಸಭೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.