ADVERTISEMENT

‘ಮಹಿಳಾ ಚಳವಳಿಗೆ ಗಟ್ಟಿ ನೆಲೆ ಒದಗಿಸಿದ ದಬ್ಬೆ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2018, 19:30 IST
Last Updated 25 ಮಾರ್ಚ್ 2018, 19:30 IST
ನಗರದಲ್ಲಿ ಭಾನುವಾರ 'ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ' ಆಯೋಜಿಸಿದ್ದ ಲೇಖಕಿ ಡಾ. ವಿಜಯಾ ದಬ್ಬೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ (ಎಡದಿಂದ) ಲೇಖಕಿ ಡಾ. ವಿಜಯಾ, ಎನ್ ಗಾಯತ್ರಿ, ನೇಮಿಚಂದ್ರ, ಸುಮಿತ್ರಾಬಾಯಿ ಬಿ.ಎನ್ ಮಾತುಕತೆಯಲ್ಲಿ ತೊಡಗಿದ್ದರು. -ಪ್ರಜಾವಾಣಿ ಚಿತ್ರ
ನಗರದಲ್ಲಿ ಭಾನುವಾರ 'ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ' ಆಯೋಜಿಸಿದ್ದ ಲೇಖಕಿ ಡಾ. ವಿಜಯಾ ದಬ್ಬೆ ಅವರ ನುಡಿ ನಮನ ಕಾರ್ಯಕ್ರಮದಲ್ಲಿ (ಎಡದಿಂದ) ಲೇಖಕಿ ಡಾ. ವಿಜಯಾ, ಎನ್ ಗಾಯತ್ರಿ, ನೇಮಿಚಂದ್ರ, ಸುಮಿತ್ರಾಬಾಯಿ ಬಿ.ಎನ್ ಮಾತುಕತೆಯಲ್ಲಿ ತೊಡಗಿದ್ದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವಿಜಯಾ ದಬ್ಬೆ ಅವರಿಗೆ ಸಾಹಿತ್ಯ ಚಟುವಟಿಕೆ ತೊರೆಯಬೇಕು ಎಂದು ಸಾಕಷ್ಟು ಒತ್ತಡ ಹೇರಲಾಗಿತ್ತು. ಆದರೂ ಅವರು ಸಾಹಿತ್ಯವನ್ನೇ ಅಪ್ಪಿಕೊಂಡು ಮಹಿಳಾ ಚಳವಳಿಗೆ ಗಟ್ಟಿ ನೆಲೆ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು’ ಎಂದು ಲೇಖಕಿ ಡಾ.ಬಿ.ಎಂ. ಸುಮಿತ್ರಾ ಬಾಯಿ ತಿಳಿಸಿದರು.

ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ‘ಲೇಖಕಿ ಡಾ. ವಿಜಯಾ ದಬ್ಬೆ ನುಡಿನಮನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ತ್ರೀವಾದಿ ಸಾಹಿತ್ಯ ಲೋಕದಲ್ಲಿ ದಬ್ಬೆ ಅವರ ನಡಿಗೆ ಅವಿಸ್ಮರಣೀಯ. ‘ಕೊನೆಯಮಾತು’ ಎಂಬ ಶೀರ್ಷಿಕೆಯಲ್ಲಿ ಅವರು ತಮ್ಮ ಮೊದಲ ಕವನ ರಚಿಸಿದ್ದರು. ಕಾವ್ಯ, ವಿಮರ್ಶೆ, ಮೀಮಾಂಸೆಯ ಯುಗದಲ್ಲಿ ತನ್ನದೇ ಆದ ತಾತ್ವಿಕ ನೆಲೆಗಟ್ಟನ್ನು ಇಟ್ಟುಕೊಂಡಿಕೊಂಡಿದ್ದರು’ ಎಂದು ಹೇಳಿದರು.

ADVERTISEMENT

ಲೇಖಕಿ ಡಾ.ವಿಜಯಾ, ‘ಸರಳತೆ, ಸ್ಪಷ್ಟತೆ ಅವರ ಬರವಣಿಗೆ ಹಾಗೂ ಭಾಷಣದ ಪ್ರಮುಖ ಗುಣಗಳು. ಲೇಖಕಿಯರ ಸಂಘಟನೆಗಳು, ವಿಶ್ವವಿದ್ಯಾಲಯಗಳು, ಅಕಾಡೆಮಿಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಸೇರಿ ಅವರು ಸ್ತ್ರೀವಾದಕ್ಕೆ ತಾತ್ವಿಕ ಚೌಕಟ್ಟನ್ನು ನೀಡಿದರು’ ಎಂದು ಸ್ಮರಿಸಿದರು.

‘ಜಾತಿವಾದ ಹಾಗೂ ಮಹಿಳಾ ಶೋಷಣೆಯ ವಿರುದ್ಧ ದನಿ ಎತ್ತಿದ ಅವರು ಹಲವು ವಿರೋಧಗಳ ಮಧ್ಯೆಯೂ ಅಂದುಕೊಂಡಿದ್ದನ್ನು ಸಾಧಿಸಿದರು. ಅಂತಹವರ ವ್ಯಕ್ತಿತ್ವ ಈ ಪೀಳಿಗೆಯವರಿಗೆ ಮಾದರಿಯಾಗಬೇಕು’ ಎಂದು ಹೇಳಿದರು.

ಲೇಖಕಿ ಎನ್‌. ಗಾಯತ್ರಿ ಮಾತನಾಡಿ, ‘ಸ್ತ್ರೀವಾದವು ಕನ್ನಡದ ಸಾಹಿತ್ಯ ಕ್ಷೇತ್ರದಲ್ಲಿ ಬೀಜವಾಗಿ ಮೊಳಕೆಯೊಡೆಯುವ ಸಂದರ್ಭದಲ್ಲಿ ಈ ಕ್ಷೇತ್ರದಲ್ಲಿ ಅವರು ನಡೆಸಿದ ಬಿತ್ತನೆ ಅಮೂಲ್ಯವಾದುದು. ಮಾತು, ಬರಹ ಮತ್ತು ಸಂಘಟಿತ ಕ್ರಿಯೆಯ ಮೂಲಕ ಕರ್ನಾಟಕದ ಮಹಿಳಾ ಚಳವಳಿಗೆ ಮಾಸದ ಹೆಜ್ಜೆ ಗುರುತುಗಳನ್ನು ಬಿಟ್ಟುಹೋಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.