ಬೆಂಗಳೂರು: ಟ್ರಿಮ್ಫ್ಯಾಂಟ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಷನ್ ಪ್ರೈ. ಸಂಸ್ಥೆಯು (ಟೈಮ್) ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ಅಕ್ವಾ ರೇಜಿಯಾ–2014’ ರಾಷ್ಟ್ರೀಯ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಬೆಂಗಳೂರು ವಿಭಾಗದ ಅಂತಿಮ ಸ್ಪರ್ಧೆಯಲ್ಲಿ ಡೆಲ್ಲಿ ಪಬ್ಲಿಕ್ ಶಾಲೆ (ಬೆಂಗಳೂರು ಸೌತ್) ವಿದ್ಯಾರ್ಥಿಗಳು ವಿಜೇತರಾದರು.
ಡೆಲ್ಲಿ ಪಬ್ಲಿಕ್ ಶಾಲೆ (ಬೆಂಗಳೂರು ಸೌತ್) ವಿದ್ಯಾರ್ಥಿಗಳಾದ ಅಮನ್ ಪೋತ್ದಾರ್ ಹಾಗೂ ರಿಶಬ್ ನಾಯಕ್ ಅವರು ಉಳಿದ 5 ತಂಡಗಳನ್ನು ಸೋಲಿಸಿ, ನ.15 ರಂದು ತಿರುಚಿನಾಪಳ್ಳಿಯಲ್ಲಿ ನಡೆಯಲಿರುವ ಮುಂದಿನ ಹಂತದ ರಸಪ್ರಶ್ನೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಡೆಲ್ಲಿ ಪಬ್ಲಿಕ್ ಶಾಲೆ (ಬೆಂಗಳೂರು ಪೂರ್ವ) ವಿದ್ಯಾರ್ಥಿಗಳು ರನ್ನರ್ ಅಪ್ ವಿಜೇತರಾದರು.
ಟೈಮ್ ಸಂಸ್ಥೆ ನಿರ್ದೇಶಕ ಅಜಯ್ ಆ್ಯಂಟನಿ, ‘ರಾಷ್ಟ್ರೀಯ ಅಂತರಶಾಲಾ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯನ್ನು 2006 ರಿಂದಲೇ ಆರಂಭಿಸಲಾಗಿದೆ. ಇದುವರೆಗೆ, ದೇಶದಾದ್ಯಂತ 14 ಲಕ್ಷಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ’ ಎಂದರು.
‘ವಿಜ್ಞಾನ ರಸಪ್ರಶ್ನೆಯಿಂದ ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ತಿಳಿವಳಿಕೆ ಮೂಡಲು ಸಾಧ್ಯವಾಗುತ್ತದೆ. ಇದರಲ್ಲಿ ಸಿದ್ಧ ಮಾದರಿಯ ವಿಜ್ಞಾನ ಎಂಬುದಿಲ್ಲ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ತಿಳಿವಳಿಕೆಯನ್ನು ಬಳಸಿಕೊಂಡು ಪ್ರಶ್ನೆಗಳಿಗೆ ಉತ್ತರ ಹೇಳಬೇಕಾಗುತ್ತದೆ’ ಎಂದರು.
‘ಬೆಂಗಳೂರಿನ ಸುಮಾರು 50 ಶಾಲೆಗಳಲ್ಲಿ 8, 9 ಹಾಗೂ 10 ನೇ ತರಗತಿಯ 10 ಸಾವಿರ ವಿದ್ಯಾರ್ಥಿಗಳಿಗೆ ಪ್ರಾಥಮಿಕ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಅವರಲ್ಲಿ 500 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು’ ಎಂದು ತಿಳಿಸಿದರು.
‘500 ವಿದ್ಯಾರ್ಥಿಗಳಲ್ಲಿ ಆರು ತಂಡಗಳನ್ನು ಆಯ್ಕೆ ಮಾಡಿ, ಅವರಿಗೆ ನಾಲ್ಕು ಸುತ್ತಿನ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿ, ಅವರಲ್ಲಿ ಒಂದು ತಂಡವನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು. ‘ಹೈದರಾಬಾದ್ನಲ್ಲಿ ಡಿಸೆಂಬರ್ 2 ರಂದು ಅಂತಿಮ ಸ್ಪರ್ಧೆ ನಡೆಯಲಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.