ಬೆಂಗಳೂರು: ಮುನೇಕೊಳಾಲು ಬಳಿಯ ಸಪ್ತಗಿರಿ ಲೇಔಟ್ನಲ್ಲಿ ವಿದ್ಯುತ್ ಪ್ರವಹಿಸಿ ವೀರಪ್ಪ (75) ಹಾಗೂ ಮೋಹನ್ ಸಾಮಂತ್ (55) ಎಂಬುವರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಕಾರ್ಮಿಕ ಬಬ್ಬನ್ (35) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಮಾರತ್ತಹಳ್ಳಿ ಪೊಲಿಸರು ತಿಳಿಸಿದರು.
ಸ್ಥಳೀಯ ನಿವಾಸಿ ವೀರಪ್ಪ ಮನೆಯ ಶೌಚಾಲಯಕ್ಕೆ ಬರುತ್ತಿದ್ದ ನೀರು ಸ್ಥಗಿತವಾಗಿತ್ತು. ಅದನ್ನು ಸರಿಪಡಿಸುವಂತೆ, ಕೊಳಾಯಿ ದುರಸ್ತಿ ಮಾಡುತ್ತಿದ್ದ ಮೋಹನ್ಗೆ ಹೇಳಿದ್ದರು. ಮನೆಯ ಚಾವಣಿಯಿಂದ ಐದು ಅಡಿ ಎತ್ತರದಲ್ಲೇ ಹೈಟೆನ್ಶನ್ ವಿದ್ಯುತ್ ತಂತಿ ಹಾದುಹೋಗಿದೆ. ಮೋಹನ್ ಅದೇ ಚಾವಣಿಯಲ್ಲಿ ನಿಂತು ಕಾರ್ಮಿಕರ ಜತೆ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದರು.
‘ಶೌಚಾಲಯಕ್ಕೆ ನೀರು ಪೂರೈಸುವ ಪೈಪ್ನಲ್ಲಿ ಗಲೀಜು ತುಂಬಿಕೊಂಡಿತ್ತು. ಅದನ್ನು ತೆಗೆಯಲು ಕಾರ್ಮಿಕರು, 15 ಅಡಿ ಉದ್ದ ರಾಡ್ ಬಳಸಿದ್ದರು. ಆ ರಾಡನ್ನು ಪೈಪ್ನಲ್ಲಿ ಹಾಕಿ ಮೇಲೆತ್ತುವ ವೇಳೆ ವಿದ್ಯುತ್ ತಂತಿಗೆ ತಗುಲಿತ್ತು. ವಿದ್ಯುತ್ ಪ್ರವಹಿಸಿದ್ದರಿಂದ ರಾಡ್ ಹಿಡಿದುಕೊಂಡಿದ್ದ ವೀರಪ್ಪ ಹಾಗೂ ಮೋಹನ್ ಸ್ಥಳದಲ್ಲೇ ಮೃತಪಟ್ಟರು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.