ADVERTISEMENT

ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿ ಪಾಲನೆ ಕಷ್ಟ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 20:29 IST
Last Updated 2 ಜನವರಿ 2018, 20:29 IST
ಕಾರ್ಯಕ್ರಮದಲ್ಲಿ ಎನ್. ಪಾರ್ಥಸಾರಥಿ ಮಾತನಾಡಿದರು  –ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಎನ್. ಪಾರ್ಥಸಾರಥಿ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಮ್ಮ ದೇಶ ಸದಸ್ಯತ್ವವನ್ನು ಹೊಂದಿಲ್ಲ. ಈ ಸಮಿತಿಯ ಸದಸ್ಯತ್ವ ಸಿಕ್ಕರೆ ತಟಸ್ಥ ನೀತಿಯನ್ನು ಕಾಯ್ದುಕೊಳ್ಳುವುದು ಕಷ್ಟ ಸಾಧ್ಯ ಎಂದು ನಿವೃತ್ತ ರಾಯಭಾರಿ ಎನ್‌.ಪಾರ್ಥಸಾರಥಿ ಅಭಿಪ್ರಾಯಪಟ್ಟರು.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ‘ಭಾರತೀಯ ವಿದೇಶಾಂಗ ನೀತಿ: ಹಿಂದೆ, ಇಂದುಮತ್ತು ಸವಾಲುಗಳು’ ಕುರಿತು ಮಾತನಾಡಿದರು.

‘ಭದ್ರತಾ ಸಮಿತಿಯಲ್ಲಿ ಸ್ಥಾನ ಸಿಕ್ಕಿದ್ದೇ ಆದರೆ, ಭಾರತ ಜಾಗರೂಕತೆಯ ಹೆಜ್ಜೆ ಇಡಬೇಕಾಗುತ್ತದೆ’ ಎಂದರು.

ADVERTISEMENT

‘1962ರಲ್ಲಿ ಚೀನಾ ವಿರುದ್ಧ ಭಾರತ ಕಂಡ ಸೋಲು ದೇಶದ ಜನರ ಆತ್ಮಸ್ಥೈರ್ಯವನ್ನು ಕುಗ್ಗಿಸಿತ್ತು. ಆದರೆ, ದೋಕಲಾ ಗಡಿ ವಿವಾದದ ವಿಚಾರದಲ್ಲಿ ಅನುಸರಿಸಿದ ನೀತಿಯಿಂದ ನಮ್ಮ ದೇಶದ ಬಗ್ಗೆ ಅನ್ಯ ದೇಶಗಳು ಹೊಂದಿರುವ ಭಾವನೆ ಬದಲಾಗಿದೆ. ಚೀನಾವನ್ನು ಎದುರಿಸಬಲ್ಲ ಪ್ರಮುಖ ಶಕ್ತಿ ಭಾರತ ಎಂದೇ ಭಾವಿಸಿವೆ’ ಎಂದು ಹೇಳಿದರು.

ವಿದೇಶಾಂಗ ನೀತಿಯು ನಿಂತ ನೀರಲ್ಲ ಅಥವಾ ಏಕಾಂತದಲ್ಲಿ ಮೂಡುವ ವಿಚಾರವಲ್ಲ. ಜನರ ಸುರಕ್ಷತೆಗಾಗಿ ಚುನಾಯಿತ ಸರ್ಕಾರ ಹಾಗೂ ಅಧಿಕಾರಿ ವರ್ಗ ಜತೆಗೂಡಿ ತಳೆಯುವ ಮುಖ್ಯ ನಿರ್ಧಾರಗಳೇ ವಿದೇಶಾಂಗ ನೀತಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.