ಬೆಂಗಳೂರು: ಭಟ್ಟರಹಳ್ಳಿ ಜಂಕ್ಷನ್ ಬಳಿ ಕರ್ತವ್ಯನಿರತ ಸಂಚಾರ ಪೊಲೀಸ್ ಕಾನ್ಸ್ಟೆಬಲ್ ಮೇಲೆ ಹಲ್ಲೆಗೈದ ಆರೋಪದಡಿ ಕೆ.ಆರ್.ಪುರ ಪೊಲೀಸರು ಬುಧವಾರ ಮೂವರನ್ನು ಬಂಧಿಸಿದ್ದಾರೆ.
ಬಸವನಪುರ ನಿವಾಸಿಗಳಾದ ಶ್ರೀನಿವಾಸ್ (21), ಸಂತೋಷ್ (25) ಹಾಗೂ ಶಿವು (50) ಬಂಧಿತರು. ಆರೋಪಿಗಳು, ಮರಳು ಸಾಗಣೆ ಕೆಲಸ ಮಾಡುತ್ತಿದ್ದಾರೆ. ಕಾನ್ಸ್ಟೆಬಲ್ ಸಂಪತ್ ಹಲ್ಲೆಗೊಳಗಾದವರು.
ಬಸವನಪುರ ಕಡೆಯಿಂದ ಬಂದ ಆರೋಪಿಗಳು ಭಟ್ಟರಹಳ್ಳಿ ಜಂಕ್ಷನ್ ಬಳಿ ಮರಳು ಲಾರಿ ನಿಲ್ಲಿಸಿದ್ದರು. ಗ್ರೀನ್ ಸಿಗ್ನಲ್ ಬೀಳದಿದ್ದರೂ ಚಾಲಕ ಶ್ರೀನಿವಾಸ್ ವಿನಾಕಾರಣ ಹಾರ್ನ್ ಮಾಡುತ್ತಿದ್ದರು. ಸ್ಥಳದಲ್ಲಿದ್ದ ಸಂಪತ್ ಸಿಗ್ನಲ್ ಬೀಳುವವರೆಗೂ ಹಾರ್ನ್ ಮಾಡದಂತೆ ಸೂಚಿಸಿದ್ದರು.
ಅಷ್ಟಕ್ಕೆ ಕುಪಿತಗೊಂಡು ಲಾರಿಯಿಂದ ಇಳಿದು ಬಂದ ಚಾಲಕ, ಕಾನ್ಸ್ಟೆಬಲ್ ಜತೆ ಅನುಚಿತವಾಗಿ ವರ್ತಿಸಿ ನಿಂದಿಸಿದ್ದ. ಪರಸ್ಪರರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಬಳಿಕ ಮೂವರು ಆರೋಪಿಗಳು ಹಲ್ಲೆ ಮಾಡಿ ಸಮವಸ್ತ್ರ ಹರಿದು ಹಾಕಿದ್ದಾರೆ. ಕೂಡಲೇ ಸ್ಥಳಕ್ಕೆ ಹೋಗಿ ಅವರನ್ನು ವಶಕ್ಕೆ ಪಡೆದೆವು ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.