ಬೆಂಗಳೂರು: ರಾಜ್ಯದ ಕ್ಯಾನ್ಸರ್ ರೋಗಿಗಳು ಮೂಳೆ ಮಜ್ಜೆ ಕಸಿ ಚಿಕಿತ್ಸೆಗಾಗಿ (ಬೋನ್ ಮ್ಯಾರೊ ಟ್ರಾನ್ಸ್ಪ್ಲಾಂಟ್) ಖಾಸಗಿ ಆಸ್ಪತ್ರೆಗಳಲ್ಲಿ ₹30ರಿಂದ ₹40 ಲಕ್ಷ ಖರ್ಚು ಮಾಡುವ ಪರಿಸ್ಥಿತಿ ಇತ್ತು. ಇನ್ನು ಮುಂದೆ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿಯೇ ಈ ಸೌಲಭ್ಯ ಸಿಗಲಿದೆ.
ಈ ಚಿಕಿತ್ಸೆಯ ಗುಣಮಟ್ಟ ಹೆಚ್ಚಿಸಲು ಬಜೆಟ್ನಲ್ಲಿ ₹12 ಕೋಟಿ ಅನುದಾನ ನೀಡಲಾಗಿದೆ. ಈ ಮೊದಲೂ ಕಿದ್ವಾಯಿಯಲ್ಲಿ ಮೂಳೆ ಮಜ್ಜೆ ಕಸಿ ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಗುಣಮಟ್ಟದ ಯಂತ್ರಗಳನ್ನು ಖರೀದಿಸಿ, ಇದಕ್ಕಾಗಿಯೇ ಪ್ರತ್ಯೇಕ ಘಟಕವನ್ನು ತೆರೆಯಲಾಗುತ್ತದೆ.
‘ನಮ್ಮಲ್ಲಿ ಮೊದಲೂ ಅಲೋಜೆನಿಕ್, ಅಟೋಲಜಸ್ ಚಿಕಿತ್ಸೆಗಳು ಇದ್ದವು. ಆದರೆ ಬಜೆಟ್ನಲ್ಲಿ ಹಣ ಸಿಕ್ಕಿದ್ದರಿಂದ ಇನ್ನೂ ಹೆಚ್ಚಿನ ಗುಣಮಟ್ಟದಲ್ಲಿ ಚಿಕಿತ್ಸೆ ನೀಡಬಹುದು. ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಚಿಕಿತ್ಸೆ ಸಿಗಲಿದೆ. ಎಪಿಎಲ್ ಕಾರ್ಡ್ ಹಾಗೂ ಇತರೆ ರೋಗಿಗಳು ₹3 ರಿಂದ ₹4ಲಕ್ಷ ಪಾವತಿಸಬೇಕಾಗಬಹುದು. ವರ್ಷಕ್ಕೆ 80 ರಿಂದ 100 ರೋಗಿಗಳಿಗೆ ಮೂಳೆ ಮಜ್ಜೆ ಕಸಿ ಮಾಡಬಹುದು’ ಎಂದು ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ನಿರ್ದೇಶಕ ಲಿಂಗೇಗೌಡ ಹೇಳಿದರು.
‘ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ರಾಜ್ಯ ಘಟಕವನ್ನು ಉಪರಾಷ್ಟ್ರಪತಿಗಳೊಂದಿಗೆ ಉದ್ಘಾಟಿಸಿದ್ದ, ಮುಖ್ಯಮಂತ್ರಿಗಳು ಇಲ್ಲಿ ಮೂಳೆ ಮಜ್ಜೆ ಕಸಿ ಮಾಡಿಸುವವರಿಗೆ ಬಜೆಟ್ನಲ್ಲಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ್ದರು. ಅವರೇ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಸ್ವ ಆಸಕ್ತಿಯಿಂದ ಕ್ಯಾನ್ಸರ್ ರೋಗಿಗಳ ಹಿತಕ್ಕಾಗಿ ಯೋಚಿಸಿದ್ದಾರೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.