ADVERTISEMENT

‘ಕನಸುಗಳಿಲ್ಲದೆ ಬದುಕು ಅಸಾಧ್ಯ’

​ಪ್ರಜಾವಾಣಿ ವಾರ್ತೆ
Published 28 ಜನವರಿ 2017, 7:07 IST
Last Updated 28 ಜನವರಿ 2017, 7:07 IST

ಭಾಲ್ಕಿ: ‘ಬೆಳಕಿಲ್ಲದ ದಾರಿಯಲ್ಲಿ ಹೇಗಾದರೂ ನಡೆಯಬಹುದು. ಆದರೆ, ಕನಸುಗಳೇ ಇಲ್ಲದ ಬದುಕಿನಲ್ಲಿ ನಡೆಯಲು ಸಾಧ್ಯವಿಲ್ಲ’ ಎಂದು ಬೀದರ್‌ನ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾಧಿಕಾರಿ ಎಸ್.ಎಂ ಶಿವಪ್ರಕಾಶ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಿಕ್ಷಣ ಸಮುಚ್ಚಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ 68ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ಭಾರತದ ಗುರುಕುಲ ಪದ್ಧತಿಯ ಶಿಕ್ಷಣ ವಿದೇಶಿಗರಿಗೆ ಮಾದರಿಯಾಗಿದೆ. ದೇಶದಲ್ಲಿನ ಮೌಲ್ಯಗಳು ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ಮಹಾತ್ಮ ಗಾಂಧೀಜಿ ಅವರು ಹೇಳಿದ್ದಾರೆ. ಹಾಗಾಗಿ, ವಿದ್ಯಾರ್ಥಿಗಳು ದೇಶದ ಬಗ್ಗೆ ಅಭಿಮಾನ, ಪ್ರೀತಿ ಬೆಳೆಸಿಕೊಳ್ಳಬೇಕು. ಗಾಂಧೀಜಿ ಅವರ ಮೌಲ್ಯಗಳನ್ನು ಯಾರೂ ಮರೆಯಬಾರದು’ ಎಂದು ಕಿವಿಮಾತು ಹೇಳಿದರು.

ಮಾತೃ ಭಾಷೆ ಮೂಲಕ ಶಿಕ್ಷಣ ಪಡೆಯುವುದರಿಂದ ಮಕ್ಕಳಲ್ಲಿ ಹೃದಯ ವೈಶಾಲ್ಯತೆ, ಗುರು ಹಿರಿಯರಲ್ಲಿ ಗೌರವ ಭಾವನೆ ಬೆಳೆಯುತ್ತದೆ. ಇಂಗ್ಲಿಷ್ ಭಾಷೆ ಕಠಿಣ ಅಲ್ಲ. ಅದು ಕಠಿಣ ಎಂಬ ನಮ್ಮ ಮನಃಸ್ಥಿತಿ ಬದಲಾಗಬೇಕು ಎಂದರು.

ಇಂದಿನ ಮಕ್ಕಳಲ್ಲಿ ರಾಷ್ಟ್ರ ಪ್ರೇಮ, ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯರು ಮೊದಲ ಸ್ಥಾನದಲ್ಲಿದ್ದೇವೆ. ಕಲಿಕೆಗೆ ವಯಸ್ಸಿನ ಹಂಗಿಲ್ಲ. ಯುವಕರು ದುಶ್ಚಟಗಳಿಂದ ದೂರವಿರಬೇಕು ಎಂದು ಹೇಳಿದರು. ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿದರು.

ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯರಾದ ಬಸವರಾಜ ಮೊಳಕೀರೆ, ಮಹಾದೇವ ಪಟ್ನೆ, ರಮೇಶ ಕುಟಮಲಗೆ, ಅಧೀಕ್ಷಕ ಗಣಪತಿ ಬಾವಗೆ, ಮುಖ್ಯಶಿಕ್ಷಕರಾದ ಲಕ್ಷ್ಮಣ ಮೇತ್ರೆ, ಬಸವರಾಜ ಪ್ರಭಾ, ಮಹೇಶ ಕುಲಕರ್ಣಿ, ಪ್ರವೀಣ ಖಂಡಾಳೆ ಇದ್ದರು. ಮದನ ಗಾಂವ್ಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.