ಚಿಕ್ಕಬಳ್ಳಾಪುರ: ನಗರದ ಹೊರವಲಯದ ಕಂಟಿಗಾನಹಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಎಬಿವಿಪಿ, ಬಿಜಿಎಸ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಅರಣ್ಯ ಇಲಾಖೆ ಸಹಯೋಗದೊಂದಿಗೆ ಬೀಜದ ಉಂಡೆಗಳನ್ನು ಬಿತ್ತುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜಿಎಸ್ ಆಡಳಿತ ನಿರ್ವಹಣಾ ಅಧ್ಯಯನ ಸಂಸ್ಥೆ ಪ್ರಾಂಶುಪಾಲ ವೆಂಕಟೇಶ್ ಬಾಬು, ‘ಮಾನವನ ಅತಿ ಆಸೆ ಮತ್ತು ಸ್ವಯಂ ಅಪರಾಧಗಳಿಂದ ನದಿಗಳು ಮತ್ತು ಕಾಡುಗಳು ವಿನಾಶದ ಅಂಚಿಗೆ ತಲುಪಿ, ಪ್ರಕೃತಿ ಅಸಮತೋಲನವಾಗುತ್ತಿದೆ. ಈಗಿನಿಂದಲೇ ನಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಪರಿಸರವನ್ನು ಬೆಳೆಸುವ ಕೆಲಸ ಮಾಡದಿದ್ದರೆ ಮುಂದೊಂದು ದಿನ ದೊಡ್ಡ ಗಂಡಾಂತರ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.
ಬಿಜಿಎಸ್ ವಿಜ್ಞಾನ ಅಧ್ಯಯನ ಸಂಸ್ಥೆ ಪ್ರಾಂಶುಪಾಲ ರಮೇಶ್ ಮಾತನಾಡಿ, ‘ನಮ್ಮೆಲ್ಲರ ಉಸಿರು ಇರಬೇಕಾದರೆ ಸುತ್ತಲಿನ ಪರಿಸರದಲ್ಲಿ ಸದಾ ಹಸಿರು ಇರಬೇಕು. ಪ್ರಕೃತಿಯನ್ನು ಪುನಶ್ಚೇತನಗೊಳಿಸುವ ಈ ಮಹಾ ಯಜ್ಞಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಅದರಲ್ಲೂ ವಿದ್ಯಾರ್ಥಿಗಳು ಇಂತಹ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.
ಅರಣ್ಯಾಧಿಕಾರಿ ಶ್ರೀಧರ್ ಮಾತನಾಡಿ, ‘ಕೇವಲ ಸಸಿ ನೆಟ್ಟ ಮಾತ್ರಕ್ಕೆ ಅರಣ್ಯ ಬೆಳೆಸಿದಂತಾಗುವುದಿಲ್ಲ. ಸಸಿ ಗಿಡವಾಗುವವರೆಗೂ ಅದರತ್ತ ಗಮನವಿಟ್ಟು ಪೋಷಣೆ ಮಾಡಬೇಕು. ಗಿಡವಾಗುವ ಮರ ಎಂತಹದ್ದೇ ತೊಂದರೆಯಾದರೆ ಹೆಮ್ಮರವಾಗಿ ಬೆಳೆಯುತ್ತದೆ’ ಎಂದರು.
ಅರಣ್ಯಾಧಿಕಾರಿ ವಿಕ್ರಂ ಮತ್ತು ವಿದ್ಯಾರ್ಥಿ ಮುಖಂಡರಾದ ಮಂಜುನಾಥ್ ರೆಡ್ಡಿ, ವಿಜಯ್, ಅಖಿಲ್, ಅಮಿತ್, ಚಂದನ್, ಲೋಚನ್, ಪವನ್, ಅರುಣಾ, ಸ್ವಾತಿ, ಗಗನ, ವೀಣಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.