ಚಿಕ್ಕಬಳ್ಳಾಪುರ: ಕಳೆದ ಒಂದು ವರ್ಷದಿಂದ ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಅವರ ‘ಪದತ್ಯಾಗ’ಕ್ಕೆ ಒತ್ತಾಯಿಸಿ ‘ಸ್ವಪಕ್ಷೀಯ’ರಲ್ಲೇ ಕಾಣಿಸಿಕೊಂಡ ಬಂಡಾಯದ ಬಿಸಿ ಕೊನೆಗೂ ತಣ್ಣಗಾಗಲಿಲ್ಲ. ಇದೀಗ ಹೈಕಮಾಂಡ್ ಒತ್ತಡಕ್ಕೆ ಮಣಿದ ಕೇಶವರೆಡ್ಡಿ ಅವರು ಗುರುವಾರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗ್ಡೆ ಅವರಿಗೆ ಕೇಶವರೆಡ್ಡಿ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
28 ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ 21 ಕಾಂಗ್ರೆಸ್ ಸದಸ್ಯರು, ಐದು ಜೆಡಿಎಸ್, ಬಿಜೆಪಿ ಮತ್ತು ಸಿಪಿಎಂ ತಲಾ ಒಬ್ಬ ಸದಸ್ಯರು ಇದ್ದಾರೆ. ಈ ಪೈಕಿ ಕಾಂಗ್ರೆಸ್ನ 21 ಸದಸ್ಯರಲ್ಲಿ 14 ಸದಸ್ಯರು ಕೇಶವರೆಡ್ಡಿ ಅವರ ಆಡಳಿತ ವೈಖರಿ ಖಂಡಿಸಿ, ಅವರ ರಾಜೀನಾಮೆಗೆ ಒಂದು ವರ್ಷದಿಂದ ಒತ್ತಾಯಿಸುತ್ತಲೇ ಬಂದಿದ್ದರು.
ಈ ನಡುವೆ ‘ಬಂಡಾಯ’ ಸದಸ್ಯರು ಐದು ಸಾಮಾನ್ಯ ಸಭೆಗಳಿಗೆ ಬಹಿಷ್ಕರಿಸಿದ್ದರು. ಎರಡ್ಮೂರು ಬಾರಿ ಬೇರೆ ಬೇರೆ ಕಾರಣಗಳನ್ನು ನೀಡಿ ಸಾಮಾನ್ಯ ಸಭೆ ರದ್ದು ಮಾಡಲಾಗಿತ್ತು. ಆಗೆಲ್ಲ ಸದಸ್ಯರು ಸಭೆ ಬಹಿಷ್ಕರಿಸಿದ್ದನ್ನು ಅಲ್ಲಗಳೆಯುತ್ತ ಬರಲಾಗಿತ್ತು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ ‘ಕೈ’ ಗಾಯಕ್ಕೆ ಮುಲಾಮು ಸವರುವ ಪ್ರಯತ್ನ ಕೂಡ ಫಲ ನೀಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.