ADVERTISEMENT

ಜೆಡಿಎಸ್‌ ಅಧಿಕಾರಕ್ಕೆ ಪಣ: ಸಲಹೆ

​ಪ್ರಜಾವಾಣಿ ವಾರ್ತೆ
Published 18 ಮೇ 2017, 6:21 IST
Last Updated 18 ಮೇ 2017, 6:21 IST
ಚಿಕ್ಕಮಗಳೂರಿನ ಎಐಟಿ ಕಾಲೇಜು ಬಳಿಯ ಒಕ್ಕಲಿಗರ ಭವನದಲ್ಲಿ ಬುಧವಾರ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಉದ್ಘಾಟಿಸಿದರು.
ಚಿಕ್ಕಮಗಳೂರಿನ ಎಐಟಿ ಕಾಲೇಜು ಬಳಿಯ ಒಕ್ಕಲಿಗರ ಭವನದಲ್ಲಿ ಬುಧವಾರ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಉದ್ಘಾಟಿಸಿದರು.   

ಚಿಕ್ಕಮಗಳೂರು: ‘ಎಚ್.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲೇ ಬೇಕು ಎಂಬ ದೃಢ ನಿಶ್ಚಯದಿಂದ ಪರಿಶ್ರಮ ಪಡಬೇಕು’ ಎಂದು ಪಕ್ಷದ  ರಾಜ್ಯಮಟ್ಟದ ಬೂತ್ ಸಮಿತಿ ಅಧ್ಯಕ್ಷ ಶಾಸಕ ಸುರೇಶ್ ಬಾಬು ಜೆಡಿಎಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ಜೆಡಿಎಸ್ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಬುಧವಾರ ನಗರದ ಎಐಟಿ ಕಾಲೇಜು ಬಳಿಯ ಒಕ್ಕಲಿಗರ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ಜೆಡಿಎಸ್ ಅಧಿಕಾರದಲ್ಲಿದ್ದಾಗ ಮಾಡಿದ ಜನಪರ ಕೆಲಸ, ಅಭಿವೃದ್ಧಿಕಾರ್ಯಗಳನ್ನು ರಾಜ್ಯದ ಜನತೆ ಇಂದಿಗೂ ಸ್ಮರಿಸುತ್ತಾರೆ.ಜನರ ಭಾವನೆಗಳನ್ನು ಜೆಡಿಎಸ್ ಪರ ಮತಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡಬೇಕಾಗಿದೆ’ ಎಂದರು.

ADVERTISEMENT

‘ಮುಂದಿನ ವಿಧಾನ ಸಭೆ ಚುನಾವಣೆ ಜೆಡಿಎಸ್‌ಪಕ್ಷಕ್ಕೆ ಅಳಿವು ಉಳಿವಿನ ವಿಷಯಾವಾಗಿದೆ, ಪಕ್ಷ ನಿಷ್ಠೆಯಿಂದ ಚುನಾವಣೆಗಳಲ್ಲಿ ಕೆಲಸ ನಿರ್ವಹಿಸಬೇಕು. ಇಂದಿನಿಂದಲೇ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಮೈಸೂರು ನೈರುತ್ಯ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ‘ಕಾಂಗ್ರೆಸ್ ಮತ್ತು ಬಿಜೆಪಿಯ ದುರಾಡಳಿತ ಮತ್ತು ಎರಡೂ ಪಕ್ಷಗಳ ಮುಖಂಡರ ಬೀದಿ ಜಗಳದಿಂದ ಜನತೆ ಬೇಸತ್ತಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ  ರೈತರ ಸಾಲ ಮನ್ನಾ ಮಾಡುವುದಾಗಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಸಿದ್ದಾರೆ’ ಎಂದರು.

ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಮಾತನಾಡಿ, ‘ಪಕ್ಷದ ಕಾರ್ಯಕರ್ತರು, ಮುಖಂಡರು ಮತ್ತು ಹಿರಿಯ ನಾಯಕರು  ವಿಶ್ರಮಿಸಿದೇ ಇಂದಿನಿಂದಲೇ ಪಕ್ಷ ಸಂಘಟನೆ ಕೆಲಸದಲ್ಲಿ ತೊಡಗಬೇಕು’ ಎಂದರು.

ಜಿಲ್ಲಾಧ್ಯಕ್ಷ ರಂಜನ್ ಅಜಿತ್‌ಕುಮಾರ್, ರಾಜ್ಯ ಪ್ರಧಾನಕಾರ್ಯದರ್ಶಿ ಎಚ್.ಎಚ್.ದೇವರಾಜ್,  ವಕ್ತಾರ ಎಸ್.ಎಲ್.ಭೋಜೇಗೌಡ, ಹೊಲದಗದ್ದೆ ಗಿರೀಶ್ , ಕಾರ್ಯದರ್ಶಿ ಎಚ್.ಡಿ.ವೆಂಕಟೇಶ್ ,ಪಕ್ಷದ ಜಿಲ್ಲಾ ವೀಕ್ಷಕ ನಿಂಗಪ್ಪ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.