ಮೂಡಿಗೆರೆ: ತಾಲ್ಲೂಕಿನೆಲ್ಲೆಡೆ ಎರಡು ದಿನಗಳಿಂದ ಬೀಸುತ್ತಿರುವ ರಭಸವಾದ ಗಾಳಿ ಅಪಾರ ಪ್ರಮಾಣದ ಬೆಳೆಯನ್ನು ನೆಲ ಕಚ್ಚಿಸಿದೆ. ಭಾನುವಾರ ಮಧ್ಯರಾತ್ರಿಯಿಂದ ಪ್ರಾರಂಭವಾಗಿರುವ ಗಾಳಿ ಮಂಗಳವಾರವೂ ಮುಂದುವರೆದಿದ್ದು, ಬಿಳ್ಳೂರು, ಹೊರಟ್ಟಿ, ಕೂಡಳ್ಳಿ, ಸಬ್ಬೇನಹಳ್ಳಿ ಮುಂತಾದ ಪ್ರದೇಶಗಳಲ್ಲಿ ಬೆಳೆಯಲಾಗಿದ್ದ ಬಾಳೆ ಬೆಳೆಯು ಧರೆಗುರುಳಿವೆ. ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಕಟಾವಿವೆ ಬಂದಿದ್ದ ಭತ್ತದ ಪೈರೆಲ್ಲವೂ ನೆಲಕ್ಕುರುಳಿ, ಕೃಷಿಗೆ ಹಿನ್ನೆಡೆ ಉಂಟುಮಾಡಿದೆ. ಕಟಾವಿನ ಕಡೆ ಹಂತದಲ್ಲಿರುವ ಅರೇಬಿಕಾ ಕಾಫಿಯು ಗಾಳಿಗೆ ಸಿಲುಕಿ ಉದುರ ತೊಡಗಿದ್ದು, ಕಾಫಿ ತೋಟಗಳಲ್ಲಿ ಒಣಗಿ ನಿಂತಿರುವ ಮರಗಳು ಬೀಳುವ ಅಪಾಯ ಎದುರಾಗಿದೆ.
ರಭಸವಾಗಿ ಬೀಸುತ್ತಿರುವ ಗಾಳಿಯಿಂದ, ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ದೂಳಿನ ಪ್ರಮಾಣ ಹೆಚ್ಚಳವಾಗಿದ್ದು, ರಸ್ತೆ ತುಂಬೆಲ್ಲಾ ಪದೇ ಪದೇ ಸುಂಟರಗಾಳಿಯ ಮಾದರಿಯಲ್ಲಿ ದೂಳು ಸುತ್ತುತ್ತಿದ್ದು, ಜನರು ಮನೆಯಿಂದ ಹೊರಬರಲು ಮುಖಗವಸು ಧರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಗಾಳಿಯ ಹೊಡೆತಕ್ಕೆ ಸಿಲುಕಿ ಮರದ ಕೊಂಬೆಗಳು ವಿದ್ಯುತ್ ತಂತಿಗೆ ತಾಗುವುದರಿಂದ, ದಿನವಿಡಿ ವಿದ್ಯುತ್ ಕಣ್ಣಾಮುಚ್ಚಾಲೆಯನ್ನು ಎದುರಿಸುವಂತಾಗಿತ್ತು.
ಗಾಳಿಯ ಹೊಡೆತವು ವರ್ತಕರ ಮೇಲೂ ಪರಿಣಾಮ ಬೀರಿದ್ದು, ಪಟ್ಟಣದ ವಿವಿಧ ಅಂಗಡಿಗಳಲ್ಲಿ ಪ್ರದರ್ಶನಕ್ಕಾಗಿ ನೇತುಹಾಕುವ ಬಟ್ಟೆ, ಹೂವು, ಜೋಡಿಸಿಟ್ಟ ಹಣ್ಣುಗಳು, ಅಂಗಡಿ ನಾಮಫಲಕಗಳು ಗಾಳಿಗೆ ಸಿಲುಕಿ ಹಾರಿ ಹೋಗುತ್ತಿದ್ದ ದೃಶ್ಯ ಕಂಡು ಬಂತು. ಮಂಗಳವಾರ ಬಿಳ್ಳೂರು ಸಂತೆಯಲ್ಲಿ ವರ್ತಕರು, ತಾವು ಹಾಕಿಕೊಂಡಿದ್ದ ಡೇರೆಗಳನ್ನು ರಕ್ಷಿಸಿಕೊಳ್ಳಲು ಪರದಾಡುತ್ತಿದ್ದರು.
‘ಈ ಬಾರಿ ರಭಸವಾಗಿ ಬೀಸುತ್ತಿರುವ ಗಾಳಿಯು ಕಟಾವಾಗದ ಭತ್ತಕ್ಕೆ ಹಾನಿಯಾದರೆ, ಒಕ್ಕಲಾಟದಲ್ಲಿ ಹೊಟ್ಟು ತೂರಲು ಗಾಳಿ ಸೂಕ್ತವಾಗಿದೆ. ಬಾಳೆ ಬೆಳೆಗೆ ಗಾಳಿ ಹಾನಿಯಾಗಿದ್ದು, ಎಂತಹ ಕಂಬ ಕಟ್ಟಿದರೂ ಬಾಳೆ ನೆಲಕ್ಕುರುಳುತ್ತಿವೆ’ ಎಂದು ರೈತ ಲಕ್ಷ್ಮಣಗೌಡ ಗಾಳಿಯ ಪರಿಣಾಮವನ್ನು ಹಂಚಿಕೊಂಡರು.
ಗಾಳಿಯ ಜತೆಗೆ ಎರಡು ದಿನಗಳಿಂದ ಚಳಿಯ ಪ್ರಮಾಣವು ಹೆಚ್ಚಳವಾಗಿದ್ದು, ಚಳಿ ಗಾಳಿ ಹೆಚ್ಚಾಗಿದ್ದಾರೆ, ಮುಂಬರುವ ವರ್ಷದಲ್ಲಿ ಮಳೆಯ ಪ್ರಮಾಣವೂ ಹೆಚ್ಚಾಗುತ್ತದೆ ಎಂಬುದು ರೈತರ ಲೆಕ್ಕಾಚಾರವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.