ತರೀಕೆರೆ: ಪ್ರಧಾನಿ ಮೋದಿಯವರಿಗೆ ಹಿಂದೆ ವೀಸಾ ನೀಡಲು ನಿರಾಕರಿಸುತ್ತಿದ್ದ ಅಮೆರಿಕ ಇಂದು ಮೋದಿಯವರ ಚುನಾವಣೆ ಹಾಗೂ ಆಡಳಿತದ ಶೈಲಿ ಯನ್ನು ಮೆಚ್ಚಿ ಅದನ್ನು ಅಳವಡಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿರುವುದು ಬಿಜೆಪಿಗೆ ಸಂದ ಗೌರವ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರೇಮ್ ಕುಮಾರ್ ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ದೇಶದಲ್ಲಿ ಬಿಜೆಪಿ ತನ್ನದೇ ಆದ ಛಾಪು ಮೂಡಿಸಿದ್ದು, ರಾಜ್ಯದಲ್ಲಿ ಮಿಷನ್ 150 ಗುರಿಯನ್ನು ದಾಟುವು ದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ‘ಚುನಾವಣೆಗೆ 11 ತಿಂಗಳು ಬಾಕಿ ಇರುವುದರಿಂದ ಕಾರ್ಯಕರ್ತರಲ್ಲಿ ಯುದ್ಧೋತ್ಸಾಹ ಮೂಡಬೇಕಿದ್ದು, ಕ್ಷೇತ್ರದ ಶಾಸಕರ ದುರಾಡಳಿತವನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯ ಕರ್ತರು ಮಾಡಬೇಕು. ರೈತರಿಗೆ ಸಾಗು ವಳಿ ಚೀಟಿಯನ್ನು ನೀಡಲು ಸಾಧಾರಣ ಜಮೀನಿಗೆ ₹1 ಲಕ್ಷ ಹಾಗೂ ಫಲವತ್ತಾದ ಭೂಮಿಗೆ ₹2 ಲಕ್ಷ ವನ್ನು ಶಾಸಕರ ಕುಟುಂಬದವರು ವಸೂಲಿ ಮಾಡುತ್ತಿ ದ್ದಾರೆ’ ಎಂದು ಆರೋಪಿಸಿದರು.
‘ಶಾಸಕರು ಸಾವಿರಾರು ಕೋಟಿ ಅನುದಾನ ತಂದಿರುವ ಬಗ್ಗೆ ಬೊಗಳೆ ಬಿಡುತ್ತಿದ್ದಾರೆ. ಲಕ್ಕವಳ್ಳಿ-ಅಜ್ಜಂಪುರ ರಸ್ತೆಯ ಹೊರತಾಗಿ ಯಾವುದೇ ರಸ್ತೆ ಸಮರ್ಪಕವಾಗಿ ಅಭಿವೃದ್ದಿಯಾಗಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ತಾಲ್ಲೂಕಿನ 80 ಕೆರೆಗಳಿಗೆ ನೀರು ನೀಡುವ ಕೆಲಸಕ್ಕೆ ಡಿಪಿಆರ್ ಇನ್ನು ಆಗಿಲ್ಲ’ ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಂಭೈ ನೂರು ಆನಂದಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಆನಂದಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪದ್ಮಾವತಿ, ಮುಖಂಡರಾದ ಶಾಂತ, ಸುನೀತಾ, ಟಿ.ಜಿ.ಮಂಜುನಾಥ್, ಅಜಯ್ ಕುಮಾರ್, ಮನೋಜ್ ಕುಮಾರ್ ಲಕ್ಕವಳ್ಳಿ ರಮೇಶ್, ಅರೇಕಲ್ ಶಿವಣ್ಣ ಮುಂತಾದವರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.