ADVERTISEMENT

ಜೀವ ರಕ್ಷಣೆಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2018, 10:07 IST
Last Updated 12 ಫೆಬ್ರುವರಿ 2018, 10:07 IST

ನರಸಿಂಹರಾಜಪುರ: ಮಾನವ ದೇಹದಲ್ಲಿ ತಲೆ ಅತ್ಯಂತ ಪ್ರಮುಖ ಭಾಗವಾಗಿದ್ದು, ಅಪಘಾತ ಸಂಭವಿಸಿದಾಗ ಇದಕ್ಕೆ ಹಾನಿಯಾಗದಂತೆ ತಡೆಗಟ್ಟಲು ಹೆಲ್ಮೆಟ್ ಧರಿಸುವುದು ಅವಶ್ಯಕ ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಲ್ದೋಸ್ ತಿಳಿಸಿದರು.

ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಪ್ರಾಧಿಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಗುಣಮಟ್ಟದ ಹೆಲ್ಮೆಟ್ ಧರಿಸುವ ಕುರಿತು ಕಾನೂನು ಅರಿವು ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವ ದೇಹದಲ್ಲಿ 208 ಮೂಳೆಗಳಿದ್ದು, ಎಲ್ಲ ಭಾಗದಲ್ಲೂ ಮೊದಲು ಮೂಳೆಯಿದ್ದು ಒಳಭಾಗದಲ್ಲಿ ಮಾಂಸವಿದ್ದರೆ. ಮೆದಳಿನಲ್ಲಿ ಮಾತ್ರ ಮೂಳೆ ಒಳಭಾಗದಲ್ಲಿದ್ದು ಮಾಂಸ ಮೇಲಿದೆ. ಹಾಗಾಗಿ ಅಪಘಾತವಾದಾಗ ತಲೆಗೆ ಗಾಯವಾದಲ್ಲಿ ಜೀವ ಹೋಗುವ ಸಾಧ್ಯತೆ ಇದ್ದು ಹೆಲ್ಮೆಟ್ ಧರಿಸಿದ್ದರೆ ಇಂತಹ ಅಪಾಯವನ್ನು ತಪ್ಪಿಸಬಹುದು’ ಎಂದರು.

ADVERTISEMENT

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನ್ಯಾಯಾಧೀಶೆ ಅನಿತಾ ಮಾತನಾಡಿದ ‘ ದೇಶದಲ್ಲಿ ಸಂಭವಿಸುವ ಅಪಘಾತದಲ್ಲಿ ಶೇ 40ರಷ್ಟು ಮರಣಗಳು ಹೆಲ್ಮೆಟ್ ಧರಿಸದೇ ಇರುವುದರಿಂದ ಸಂಭವಿಸುತ್ತಿದೆ. ಕಡಿಮೆ ಬೆಲೆಯ ಹೆಲ್ಮೆಟ್ ಧರಿಸಿ ಜೀವ ಕಳೆದುಕೊಳ್ಳುವುದಕ್ಕಿಂತ ಐಎಸ್‌ಐ ಮುದ್ರೆಯಿರುವ ಗುಣಮಟ್ಟದ ಹೆಲ್ಮೆಟ್ ನ್ನು ಮಾತ್ರ ಧರಿಸಬೇಕು ಎಂದು ಸಲಹೆ ನೀಡಿದರು.

ವಕೀಲ ಎಸ್‌.ಎಸ್.ಸಂತೋಷ್ ಕುಮಾರ್ ಗುಣಮಟ್ಟದ ಹೆಲ್ಮೆಟ್ ಧರಿಸುವ ಕುರಿತು ಉಪನ್ಯಾಸ ನೀಡಿ ‘ಕಾನೂನಿನ ಉದ್ದೇಶ ಸಮಾಜದ ಜನರ ಹಿತವನ್ನು ಕಾಪಾಡುವುದು. ಮೋಟಾರು ವಾಹನ ಕಾಯ್ದೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಅಪಘಾತವಾದಾಗ ತಲೆ ಮತ್ತು ಮಿದುಳಿಗೆ ಹಾನಿಯಾಗುವುದರಿಂದ ಹೆಲ್ಮೆಟ್ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. ಅಪಘಾತದಲ್ಲಿ ಮರಣ ಹೊಂದುವವರ ಸಂಖ್ಯೆ ಉತ್ತರಪ್ರದೇಶದಲ್ಲಿ ಹೆಚ್ಚು ಹಾಗೂ ತಮಿಳುನಾಡಿನಲ್ಲಿ ಕಡಿಮೆ ಇದೆ. ಸಮೂಹ ಸಾರಿಗೆಗೆ ಆದ್ಯತೆ ನೀಡಿದರೆ ಅಪಘಾತಗಳ ಸಂಖ್ಯೆ ಕಡಿಮೆ ಮಾಡಬಹುದು’ ಎಂದರು.

ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಟಿ.ಗೋಪಿನಾಥ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಂಕರಮೂರ್ತಿ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಜಗನ್ನಾಥ್, ಸಬ್ ಇನ್‌ಸ್ಪೆಕ್ಟರ್ ರವಿ ನಿಡಘಟ್ಟ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.