ಹೊಸದುರ್ಗ: ಜಲಾನಯನ ಅಭಿವೃದ್ಧಿ ಯೋಜನೆಯಡಿ ಮಳೆ ನೀರು ಸಂಗ್ರಹಿಸುವ ಮೂಲಕ ಅಂತರ್ಜಲ ವೃದ್ಧಿಸಲು ತಾಲ್ಲೂಕಿನ ಕೃಷಿ ಇಲಾಖೆ ಆದ್ಯತೆ ನೀಡಿದೆ.
ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮ ನೈಸರ್ಗಿಕ ಸಂಪತ್ತಿನ ನಾಶದಿಂದ ಮಣ್ಣಿನ ಸವಕಳಿ ಹೆಚ್ಚಾಗಿ ಭೂ ಫಲವತ್ತತೆ ಕಡಿಮೆಯಾಗುತ್ತದೆ. ಇದರ ಪರಿಣಾಮ ಕೃಷಿ ಉತ್ಪನ್ನದ ಇಳುವರಿ ಕಡಿಮೆಯಾಗುತ್ತದೆ. ಆದ್ದರಿಂದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಬೇಡಿಕೆ, ಜಾನುವಾರಿಗೆ ಮೇವು ಮತ್ತು ಕೃಷಿ ಆಧಾರಿತ ಗುಡಿಕೈಗಾರಿಕೆಗಳನ್ನು ಸುಸ್ಥಿತಿಯಲ್ಲಿ ಇಡುವುದು ಜಲಾನಯನ ಅಭಿವೃದ್ಧಿ ಯೋಜನೆಯ ಉದ್ದೇಶ.
ನಾಲ್ಕೈದು ವರ್ಷಗಳಿಂದ ಮಳೆ ಕೊರತೆಯಿಂದ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದಿದೆ. ಬಿದ್ದ ಮಳೆ ನೀರು ಪೋಲು ಆಗದಂತೆ ಇಂಗಿಸುವ ಕಾರ್ಯ ಮಾಡುವುದು ಅತ್ಯವಶ್ಯಕವಾಗಿದ್ದು, ಬಲ್ಲಾಳಸಮುದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಎಲ್ಲಾ ರೈತರ ಜಮೀನುಗಳಿಗೆ ಕಂದಕ ಬದುಗಳನ್ನು ಹಾಕಿಸಲಾಗಿದೆ. ಇದರಿಂದ ಮಣ್ಣಿನ ಸವಕಳಿ ಆಗುವುದು ತಡೆಗಟ್ಟಲಾಗಿದೆ. ಮಳೆ ನೀರು ಭೂಮಿಗೆ ಇಂಗುವುದರಿಂದ ಅಂತರ್ಜಲ ಸಾಕಷ್ಟು ವೃದ್ಧಿಯಾಗುತ್ತದೆ ಎನ್ನುತ್ತಾರೆ ಶ್ರೀರಾಂಪುರ ಹೋಬಳಿ ಕೃಷಿ ಅಧಿಕಾರಿ ಸಿ.ಎಸ್.ಈಶ.
‘ಚೆಕ್ಡ್ಯಾಂ, ಗೋಕಟ್ಟೆ ಅಥವಾ ನಾಲಾಬದು ಹಾಗೂ ಕೃಷಿಹೊಂಡ ನಿರ್ಮಿಸುವುದರಿಂದ ಜಾನುವಾರು, ಕಾಡು ಪ್ರಾಣಿ ಹಾಗೂ ಪಕ್ಷಿಗಳಿಗೆ ಕುಡಿಯುವ ನೀರು ಸಿಗುತ್ತದೆ. ಅಕ್ಕ-ಪಕ್ಕದ ತೋಟಗಳು, ಬೋರ್ವೆಲ್ಗಳಲ್ಲಿ ಜಲ ಮರುಪೂರಣವಾಗುತ್ತದೆ. ಆದ್ದರಿಂದಾಗಿ ಎಲ್ಲಾ ರೈತರು, ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು ಮತ್ತು ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಒತ್ತು ಕೊಡಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎ.ಸಿ.ಮಂಜು ಸಲಹೆ ನೀಡಿದ್ದಾರೆ.
–ಎಸ್.ಸುರೇಶ್ ನೀರಗುಂದ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.