ADVERTISEMENT

ದುರಸ್ತಿ ಕಾಣದ ಟೌನ್‌ಹಾಲ್‌

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 5:11 IST
Last Updated 4 ಸೆಪ್ಟೆಂಬರ್ 2017, 5:11 IST

ಹುಬ್ಬಳ್ಳಿ: ಅದರುಗುಂಚಿ ಶಂಕರಗೌಡರು ಕರ್ನಾಟಕ ಏಕೀಕರಣ ಸತ್ಯಾಗ್ರಹ ಪ್ರಾರಂಭ ಮಾಡಿದ್ದ ಹಾಗೂ ಮೈಸೂರು ಅರಸು ಮನೆತನದ ಜಯಚಾಮರಾಜೇಂದ್ರ ಒಡೆಯರ್‌ ಉದ್ಘಾಟಿಸಿದ್ದ ಹುಬ್ಬಳ್ಳಿಯ ಟೌನ್‌ ಹಾಲ್‌ (ನಗರ ಭವನ) ಸಮರ್ಪಕ ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆಯಾಗಿದ್ದ ಟೌನ್‌ ಹಾಲ್‌ ಇಂದು ಪಾಲಿಕೆ ವಲಯ ಕಚೇರಿ–8ರ ಕಾರ್ಯಾಲಯವಾಗಿದೆ. ವಲಯ ಕಚೇರಿಗೂ ಪಕ್ಕದಲ್ಲಿ ಕಟ್ಟಡ ಕಟ್ಟುತ್ತಿದ್ದು ಮುಂದಿನ ದಿನಗಳಲ್ಲಿ ಯಾವುದಕ್ಕೂ ಬಳಕೆಯಾಗದಂತಹ ಸ್ಥಿತಿಯಲ್ಲಿದೆ.

ಇತಿಹಾಸ: 1953ರಲ್ಲಿ ಪ್ರಾರಂಭವಾದ ನಗರ ಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ನಂತರ ಭವನದಲ್ಲಿ ಡ್ರಾಮಾ ಕಂಪನಿಗಳಿಗೆ ಅವಕಾಶ ಮಾಡಿಕೊಡಲಾಯಿತು. ನಾಟಕ ಪ್ರದರ್ಶಿಸಲು ಪೈಪೋಟಿ ನಡೆಸಿ ಅವರು ಕೈ, ಕೈ ಮಿಲಾಯಿಸಿದ್ದರಿಂದ ಡ್ರಾಮಾ ಕಂಪನಿಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಲಾಯಿತು.  ಹಲವು ವರ್ಷಗಳ ಖಾಲಿಯೇ ಬಿದ್ದಿತ್ತು. ಈಗ ಪಾಲಿಕೆ ವಲಯ ಕಚೇರಿ ಇದೆ.

ADVERTISEMENT

‘ಟೌನ್‌ ಹಾಲ್‌ ಅಭಿವೃದ್ಧಿ ಪಡಿಸಲು ಎಸ್‌ ಆರ್. ಬೊಮ್ಮಾಯಿ ಅವರು ಕೇಂದ್ರ ಸಚಿವರಾಗಿದ್ದಾಗ ₹3 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ನಂತರ ಬಿ.ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಧ್ವನಿ ವರ್ಧಕ, ಬೆಳಕಿನ ವ್ಯವಸ್ಥೆ ಹಾಗೂ ವೇದಿಕೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದ್ದರು. ಎರಡೂ ಬಾರಿಯು ಅನುದಾನ ಬೇರೆ ಕಾಮಗಾರಿಗೆ ಬಳಸಿಕೊಳ್ಳಲಾಯಿತು’ ಎಂದು ದೂರುತ್ತಾರೆ ಡಾ. ಗೋವಿಂದ ಮಣ್ಣೂರ.

ಕಾವಲುಗಾರ ಇಲ್ಲದಿರುವುದರಿಂದ ರಾತ್ರಿ ಕುಡುಕರ ತಾಣವಾಗಿದೆ ಎಂದು ಹಿರಿಯ ನಾಗರಿಕರೊಬ್ಬರೂ ಬೇಸರ ವ್ಯಕ್ತ ಪಡಿಸುತ್ತಾರೆ. ಗೋಡೆಯ ಮೇಲೆ ಗಿಡ: ಸಮರ್ಪಕ ನಿರ್ವಹಣೆಯಿಲ್ಲದಿರುವುದರಿಂದ ಕಟ್ಟಡದ ಗೋಡೆಯ ಮೇಲೆ ಗಿಡಗಳು ಬೆಳೆದಿದ್ದು, ಕಟ್ಟಡಕ್ಕೆ ಧಕ್ಕೆಯಾಗುತ್ತಿದೆ. ‘ಟೌನ್‌ ಹಾಲ್‌ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲ. ಸ್ಥಳ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’  ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ  ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.