ADVERTISEMENT

ಕಾಟಾಚಾರಕ್ಕೆ ಸಾಲ ಮನ್ನಾ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 7:45 IST
Last Updated 22 ಜೂನ್ 2017, 7:45 IST

ಹಾಸನ: ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಜುಲೈ 10ರಂದು ವಿಧಾನ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದರಿಂದ ರಾಜ್ಯ ಸರ್ಕಾರ ಕಾಟಾಚಾರಕ್ಕೆ ಸಾಲ ಮನ್ನಾ ಘೋಷಿಸಿದೆ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್‌ ತಿಳಿಸಿದರು.

‘ರಾಜ್ಯ ಸರ್ಕಾರ ಸಹಕಾರಿ ಸಂಘಗಳ ಸಂಪೂರ್ಣ ಸಾಲ ಮನ್ನಾ ಮಾಡುವಲ್ಲಿ ವಿಫಲವಾಗಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶಗಳಲ್ಲಿ ₹ 1 ಲಕ್ಷ ಹಾಗೂ ಕಾಂಗ್ರೆಸ್‌ ಆಡಳಿತ ನಡೆಸುವ ಪಂಜಾಬ್‌ನಲ್ಲಿ ₹ 2 ಲಕ್ಷದವರೆಗೂ ಸಾಲಮನ್ನಾ ಮಾಡಲಾಗಿದೆ. ಆದರೆ, ರಾಜದ ರೈತರ ಕಣ್ಣೊರೆಸುವ ಮತ್ತು ತುಟಿಗೆ ತುಪ್ಪ ಸವರಲು ಸಹಕಾರಿ ಸಂಘಗಳ ಕೇವಲ ₹ 50 ಸಾವಿರವರೆಗೆ ಮನ್ನಾ ಮಾಡಿದೆ’ ಎಂದು ಬುಧವಾರ ಪ್ರತಿಕಾಗೋಷ್ಠಿಯಲ್ಲಿ ಲೇವಡಿ ಮಾಡಿದರು.

ರಾಜ್ಯದಲ್ಲಿ ಮೂರು ವರ್ಷಗಳಿಂದ ಬರವಿದೆ. ಸಿದ್ದರಾಮಯ್ಯ  ಅವರು ಈ ಕೆಲಸವನ್ನೂ ಮುಂಚೆಯೇ ಮಾಡಿದ್ದರೆ ರಾಜ್ಯದಲ್ಲಿ ಎಷ್ಟೋ ರೈತರ ಪ್ರಾಣ ಉಳಿಯುತ್ತಿತ್ತು. ರಾಜ್ಯದಲ್ಲಿ ಈಗಾಗಲೇ ಸಾಲಬಾಧೆಯಿಂದ 2500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ADVERTISEMENT

ರಾಜ್ಯ ಸರ್ಕಾರ ಮಾಡಿರುವ ಸಾಲ ಮನ್ನಾದಿಂದ ಸಣ್ಣ ಹಾಗೂ ಮಧ್ಯಮ ರೈತರಿಗೆ ಯಾವುದೇ ಪ್ರಯೋಜನವಿಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ಸಾಲಮನ್ನಾ ಜತೆಗೆ ₹ 10 ಲಕ್ಷದ ವಿಶೇಷ ಪರಿಹಾರ ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹಿಸಿದರು.

‘ಪಕ್ಷದ ಜಿಲ್ಲಾ ಪಂಚಾಯಿತಿ ಸದಸ್ಯೆ ರತ್ನಮ್ಮ ಲೋಕೇಶ್‌ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪಕ್ಷದ ಬೆಳವಣಿಗೆ ಸಹಿಸದ ವಿರೋಧ ಪಕ್ಷದ ಮುಖಂಡರು ಅವರ ದಿಕ್ಕು ತಪ್ಪಿಸಿದ್ದಾರೆ. ಅವರು ಮೊದಲಿನಿಂದಲೂ ಪಕ್ಷ ವಿರೋಧಿ ಚಟುವಟಿಕೆ ಹಾಗೂ ಕಾಂಗ್ರೆಸ್‌ನೊಂದಿಗೆ ಗುರುತಿಸಿ ಕೊಂಡಿದ್ದಾರೆ.

ಆದ್ದರಿಂದ ರತ್ನಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ವರಿಷ್ಠರಿಗೆ ದೂರು ನೀಡಲಾಗಿದೆ’ ಎಂದು  ಪ್ರಶ್ನೆಗೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಚಂದ್ರಣ್ಣ, ಶೋಬನ್‌ಬಾಬು, ವಿಜಯ್‌, ವೇಣುಕುಮಾರ್‌ ಇದ್ದರು.

* * 

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲೇ ಹೊರತು ಎಲ್ಲರ ಮನೆ ಬಾಗಿಲಿಗೆ ಹೋಗುವುದಕ್ಕಲ್ಲ
ಯೋಗಾ ರಮೇಶ್‌
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.