ಹೊಳೆನರಸೀಪುರ: ತಾಲ್ಲೂಕಿನಲ್ಲಿ 50 ವರ್ಷಗಳಿಂದ ಆಡಳಿತ ನಡೆಸಿದ ಜೆಡಿಎಸ್ ಹಾಗೂ 5 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ನಿಂದಾಗಲಿ ಹಳ್ಳಿಮೈಸೂರು ಹೋಬಳಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಯೋಗಾರಮೇಶ್ ಆರೋಪಿಸಿದರು.
ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ಅರಕಲಗೂಡು ವಿಧಾನ ಸಭಾ ಕ್ಷೇತ್ರದ ಕ್ಯಾತನಹಳ್ಳಿ ಗ್ರಾಮದಲ್ಲಿ ಈಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಹೋಬಳಿಯ ಗುಡ್ಡೇನಹಳ್ಳಿ ಗ್ರಾಮದಲ್ಲಿ ತಂಬಾಕು ಮಾರುಕಟ್ಟೆ ಮಾಡುತ್ತೇನೆ ಎಂದು ಅದ್ಧೂರಿಯಾಗಿ ಭೂಮಿಪೂಜೆ ಮಾಡಿಸಿ ಹೋದವರು ಮತ್ತೆ ಈ ಬಗ್ಗೆ ಚಕಾರ ಎತ್ತಿಲ್ಲ. ಇಂತಹ ಸುಳ್ಳು ಭರವಸೆ ನೀಡುವ ಅಭ್ಯರ್ಥಿಗಳಿಂದ ನಿಮಗೆ ಸಹಾಯ ಆಗುವುದಿಲ್ಲ’ ಎಂದು ಅವರು ಹೇಳಿದರು. ಬಡಕ್ಯಾತನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶೇಖರ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಿ.ಜೆ.ಪಿ. ಮುಖಂಡರಾದ ಕೆಂಪರಾಜು, ರಾಜೇಗೌಡ, ವಿಶ್ವನಾಥ್, ಯೋಗೇಶ್, ಡಿ.ಆರ್.ಶಿವಣ್ಣ, ಕೃಷ್ಣಶೆಟ್ಟಿ, ಮೋಹನ, ಸಿದ್ದೇಗೌಡ, ಲಿಂಗರಾಜು, ಬಳೆ ಮಂಜು, ಅಶೋಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.