ಹಾಸನ: ರಾಜ್ಯ ಸರ್ಕಾರ ಬಜೆಟ್ನಲ್ಲಿ ಬಿಸಿಯೂಟ ನೌಕರರನ್ನು ನಿರ್ಲಕ್ಷಿ ರುವುದನ್ನು ಖಂಡಿಸಿ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಕಾರರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮನವಿ ಸಲ್ಲಿಸಿದರು.
2001ರಲ್ಲಿ ಸುಪ್ರೀಂ ಕೋರ್ಟ್ ‘ಅಕ್ಷರ ದಾಸೋಹ ಯೋಜನೆ’ ಜಾರಿಗೆ ತಂದಿದ್ದು, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಗೈರು ಹಾಜರಾತಿ ತಪ್ಪಿಸಲು, ಹೆಣ್ಣು ಮಕ್ಕಳಿಗೆ ಶಿಕ್ಷಣದ ಉತ್ತೇಜನ, ಅಭ್ಯಾಸದಲ್ಲಿ ಮಕ್ಕಳ ಗಮನ ಸೆಳೆಯುವುದು ಹಾಗೂ ಮಧ್ಯಾಹ್ನದ ನಂತರ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುವ ಉದ್ದೇಶದಿದಂದ ಯೋಜನೆ ರೂಪಿಸಿದೆ.
ಈಗಾಗಲೇ ರಾಜ್ಯದಲ್ಲಿ ಯೋಜನೆ ಜಾರಿಯಾಗಿ 15 ವರ್ಷಗಳು ಕಳೆದಿವೆ. ಯೋಜನೆಯಡಿ ನಿತ್ಯ 1.19 ಲಕ್ಷ ಮಹಿಳೆಯರು ಸುಮಾರು 63 ಲಕ್ಷ ಮಕ್ಕಳಿಗೆ ಆಹಾರ ತಯಾರಿಸುತ್ತಿದ್ದಾರೆ. ಹೀಗಿದ್ದರೂ ಸರ್ಕಾರ ಮಾತ್ರ ಅಡುಗೆ ಕೆಲಸಗಾರರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಮಾಸಿಕ ನೀಡುವ ₹ 1900ರಿಂದ ₹ 2 ಸಾವಿರ ಸಂಭಾವನೆಯಿಂದ ಕುಟುಂಬ ನಿರ್ವಹಿಸಲು ಆಗುತ್ತಿಲ್ಲ. ಸಾಂವಿಧಾನ್ಮಾತಕ ಆಶಯವನ್ನು ಸಂಪೂರ್ಣ ಮರೆತಿರುವ ಕೇಂದ್ರ ಸರ್ಕಾರ ಸ್ವಾವಲಂಬನೆ ಬಗ್ಗೆ ಮಾತನಾಡುತ್ತಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಆದೇಶವಿದ್ದರೂ, ಸೌಲಭ್ಯಗಳು ಮಾತ್ರ ಮರಿಚಿಕೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಬಜೆಟ್ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ₹ 18,266 ಕೋಟಿ ನೀಡಿದ್ದು, ಇದರಲ್ಲಿ ನೌಕರರ ವೇತನಕ್ಕಾಗಿ ಮೀಸಲಿರಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ವೇತನ ಘೋಷಣೆ ಮಾಡಬೇಕು. ನಿವೃತ್ತ ನೌಕರರಿಗೆ ಪಿಂಚಣಿ ಘೋಷಿಸಬೇಕು. ಕೂಡಲೇ ವೇತನ ಹೆಚ್ಚಳ ಮಾಡಬೇಕು. ವೀಕೇಂದ್ರೀಕರಣ ಪ್ರಕ್ರಿಯೆ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಾಂತ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ.ಪುಷ್ಪಾ, ಖಜಾಂಚಿ ಸೌಮ್ಯಾ, ಕಾರ್ಯದರ್ಶಿ ಅರವಿಂದ್ ಇದ್ದರು.
**
ಕಿತ್ತು ಕಿನ್ನುವ ಬಡತನದ ಮಧ್ಯೆ ಬೆಲೆಏರಿಕೆಯಿಂದ ಅಗತ್ಯ ವಸ್ತುಗಳ ಖರೀದಿಗೆ ಪರದಾಡುವಂತಾಗಿದೆ.
–ಎಂ.ಬಿ.ಪುಷ್ಪಾ,
ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.