ADVERTISEMENT

ಸವಿತಾ ಸಮಾಜ ಸಂಘಟಿತವಾಗಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:22 IST
Last Updated 16 ಫೆಬ್ರುವರಿ 2017, 9:22 IST
ಅರಸೀಕೆರೆ: ಸವಿತಾ ಸಮುದಾಯದವರು ಸಂಘಟನೆಯಾಗುವುದು ಅಗತ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಮಂಗಳವಾರ ತಿಳಿಸಿದರು.ತಾಲ್ಲೂಕು ಸವಿತಾ ಸಮಾಜ ಆಯೋಜಿಸಿದ್ದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
 
ಶ್ರೀಧರಾನಂದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಂಘಟಿತರಾಗುವ ಮೂಲಕ ತಮ್ಮ ಹಕ್ಕುಗಳನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅವರು ಸಲಹೆ ನೀಡಿದರು.
 
ಸವಿತಾ ಸಮಾಜದ ಮೂಲಪುರುಷ ಸವಿತಾ ಮಹಾಋಷಿಯ ಜಯಂತ್ಯುತ್ಸವವನ್ನು ಸರ್ಕಾರದ ವತಿಯಿಂದ ಪ್ರತಿವರ್ಷ ಆಯೋಜಿಸುವ ಮೂಲಕ ಈ ಸಮಾಜಕ್ಕೆ ಪ್ರಾಧಾನ್ಯತೆ ನೀಡಬೇಕು. ಈ ಬಗ್ಗೆ ತಾವು ಸದನದಲ್ಲಿ ಚರ್ಚಿಸುವುದಾಗಿ ಅವರು ಹೇಳಿದರು.
 
ಕಲ್ಬುರ್ಗಿ ಕೊಚ್ಚೂರು ಸವಿತಾ ಪೀಠದ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಆಶೀರ್ಚನ ನೀಡಿ, ಬಡತನ ರೇಖೆಗಿಂತ ಕೆಳಗಿನವರು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಆರ್ಥಿಕವಾಗಿ ಸಬಲತೆ ಹೊಂದಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಬೇಕು ಎಂದು ಕಿವಿಮಾತು ಹೇಳಿದರು.
 
ಜಿ.ಪಂ. ಸದಸ್ಯ ಪಟೇಲ್‌ ಶಿವಪ್ಪ, ತಾ.ಪಂ ಅಧ್ಯಕ್ಷೆ ಮಂಜುಳಾಬಾಯಿ ಚಂದ್ರನಾಯಕ್‌, ಬಿಜೆಪಿ  ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ವಿ.ಟಿ ಬಸವರಾಜ್‌, ವಕೀಲ ಎನ್‌.ಡಿ.ಪ್ರಸಾದ್‌, ಸವಿತಾ ಸಮಾಜದ ರಾಜ್ಯ ಘಟಕ ಅಧ್ಯಕ್ಷ ಯು.ಕೃಷ್ಣಮೂರ್ತಿ, ಸಮಾಜದ ಜಿಲ್ಲಾ ಸಮಿತಿ ಅಧ್ಯಕ್ಷ ರವಿಕುಮಾರ್‌ ಮಾತನಾಡಿದರು. ನಗರಸಭಾ ಉಪಾಧ್ಯಕ್ಷ ಪಾರ್ಥಸಾರಥಿ, ಸಮಾಜದ ಮುಖಂಡರಾದ ಅರುಣ್‌ಕುಮಾರ್‌, ವೆಂಕಟಸ್ವಾಮಿ, ವೆಂಕಟೇಶ್‌, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ನಾಗರಾಜ್‌ ಇದ್ದರು.
 
ಕಾರ್ಯಕ್ರಮಕ್ಕೂ ಮುನ್ನ ಗ್ರಾಮದೇವತೆ ಕರಿಯಮ್ಮ ದೇವಿಯ ಉತ್ಸವಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಕೆಂಚರಾಯ ಸ್ವಾಮಿ, ಧೂತರಾಯ ಸ್ವಾಮಿ ಸಮ್ಮುಖದಲ್ಲಿ ಸವಿತಾ ಮಹಾಋಷಿಯ ಭಾವಚಿತ್ರದ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿ 206 ಬಿ.ಎಚ್‌. ರಸ್ತೆ ಮೂಲಕ ರೇಣುಕಾ ಯಲ್ಲಮ್ಮ ದೇವಿ ದೇವಾಲಯದವರೆಗೂ ಮೆರವಣಿಗೆ ನಡೆಸಲಾಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.