ADVERTISEMENT

ಸೌಲಭ್ಯ ವಂಚಿತ ಬಡಾವಣೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 8:26 IST
Last Updated 11 ಸೆಪ್ಟೆಂಬರ್ 2017, 8:26 IST

ಹಾಸನ: ರಾಜ್ಯ ಗೃಹ ಮಂಡಳಿಯಿಂದ ಚನ್ನಪಟ್ಟಣ ಬಡಾವಣೆಯನ್ನು ನಗರಸಭೆ ವಶಕ್ಕೆ ಪಡೆದು ತಿಂಗಳು ಕಳೆದರೂ ಮೂಲಸೌಲಭ್ಯ ಒದಗಿಸದಿರುವುದು ಸ್ಥಳೀಯ ನಿವಾಸಿಗಳಲ್ಲಿ ಅಸಮಾಧಾನ ಮೂಡಿಸಿದೆ. ಕರ್ನಾಟಕ ಗೃಹ ಮಂಡಳಿಯು ಆ. 9ರಂದು ₹ 6 ಕೋಟಿ ಚೆಕ್‌ ವಿತರಿಸಿ ಚನ್ನಪಟ್ಟಣ ಬಡಾವಣೆಯನ್ನು ನಗರಸಭೆ ಸುಪರ್ದಿಗೆ ವಹಿಸಿತ್ತು.

ಚನ್ನಪಟ್ಟಣ ಕೆರೆ ಅಂಗಳದ 150 ಎಕರೆ ವಿಸ್ತೀರ್ಣದ ಬಡಾವಣೆಯಲ್ಲಿ ಸಾಕಷ್ಟು ಕೆಲಸಗಳು ಆಗಬೇಕಿದೆ. ಅಲ್ಲಿ ಆಗಬೇಕಾದ ಕೆಲಸಗಳ ಪ್ರಕ್ರಿಯೆ ಇನ್ನೂ ಕ್ರಿಯಾಯೋಜನೆ ಹಂತದಲ್ಲಿದೆ. ಈ ನಿಟ್ಟಿನಲ್ಲಿ ಅಲ್ಲಿ ಒಳ ಚರಂಡಿ, ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕೆಲವು ರಸ್ತೆಗಳಲ್ಲಿ ಬೀದಿದೀಪದ ವ್ಯವಸ್ಥೆ ಇಲ್ಲದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಕಷ್ಟವಾಗುತ್ತಿದೆ.

ಅಲ್ಲದೆ, ಪಾಳು ಬಿದ್ದಿರುವ ಖಾಲಿ ಜಾಗದಲ್ಲಿ ಗಿಡ, ಗಂಟಿಗಳು ಬೆಳೆದಿರುವುದರಿಂದ ಅದು ಸೊಳ್ಳೆ, ನೊಣ, ಇಲಿ, ಹೆಗ್ಗಣಗಳಿಗೆ ಆಶ್ರಯ ತಾಣವಾಗಿದೆ. ಇದರಿಂದ ನಿವಾಸಿಗಳು ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯಲ್ಲಿ ಕಾಲ ದೂಡುವಂತಾಗಿದ್ದು, ನಗರಸಭೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಈಚೆಗಷ್ಟೆ ಎಂಜಿನಿಯರ್ ಹುದ್ದೆ ಭರ್ತಿಯಾಗಿದ್ದು, ಕೆಲವೇ ದಿನಗಳಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್‌ ಕುಮಾರ್ ‘ಪ್ರಜಾವಾಣಿಗೆ’ ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.