ಶ್ರವಣಬೆಳಗೊಳ: ಮಹಾಮಸ್ತಕಾ ಭಿಷೇಕ ಮಹೋತ್ಸವ ಅಂಗವಾಗಿ ಪಟ್ಟಣದ ಪ್ರವೇಶದಲ್ಲಿರುವ ರಾಚೇನ ಹಳ್ಳಿ ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಇದಕ್ಕಾಗಿ ಚನ್ನರಾಯಪಟ್ಟಣದ ಪುರಸಭೆಯ ಪೌರ ಕಾರ್ಮಿಕರ ಸಹಕಾರ ಪಡೆದುಕೊಂಡು ಕೆರೆಯ ಸುತ್ತಲೂ ಇದ್ದ ಗಿಡ, ಗಂಟಿಗಳನ್ನು ತೆರವು ಮಾಡಲಾಗುತ್ತಿದೆ. ಕೆರೆಯ ನೀರನ್ನು ಹೊರ ಹಾಕುವ ಕಾರ್ಯ ಒಂದೆಡೆ ಸಾಗಿದ್ದರೆ, ಮತ್ತೊಂದೆಡೆ ಜೆಸಿಬಿ ಯಂತ್ರಗಳ ಮೂಲಕ ಹೂಳೆತ್ತುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಆಸ್ತಕ್ತಿ ವಹಿಸಿದ್ದು, ಕೆರೆಯ ಫಲವತ್ತಾದ ಮಣ್ಣನ್ನು ರೈತರು ತಮ್ಮ ಜಮೀನುಗಳಿಗೆ ಟ್ರ್ಯಾಕ್ಟರ್ ನಲ್ಲಿ ಊಚಿತವಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಮಹೋತ್ಸವಕ್ಕೆ ಆಗಮಿಸುವ ಭಕ್ತರು, ಯಾತ್ರಿಕರಿಗೆ ತಾತ್ಕಾಲಿಕ ನಗರಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿಂದ ಬರುವ ತ್ಯಾಜ್ಯ ನೀರು ಸೇರಿದಂತೆ ಪಟ್ಟಣದ ಎಲ್ಲಾ ವಾರ್ಡ್ಗಳ ಒಳಚರಂಡಿ ತ್ಯಾಜ್ಯವನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಂಸ್ಕರಿಸಿ ಆ ನೀರನ್ನು ರಾಚೇನಹಳ್ಳಿ ಕೆರೆಗೆ ತುಂಬಿಸುವ ಯೋಜನೆ ರೂಪಿಸಲಾಗಿದೆ.
ಹೆಚ್ಚಿನ ಅನುದಾನಕ್ಕಾಗಿ ಪ್ರವಾಸೋದ್ಯಮ ಇಲಾಖೆಯನ್ನು ಕೋರಲಾಗಿದೆ. ಕೆರೆಯ ಸುತ್ತ ಸುಂದರ ಉದ್ಯಾನ ನಿರ್ಮಾನ ಮಾಡಿ ಸಾರ್ವಜನಿಕರಿಗೆ ವಾಯು ವಿಹಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶ ಸಹ ಇದೆ.
‘ಕೆರೆ ಸ್ವಚ್ಛಗೊಳಿಸಿ, ಉದ್ಯಾನ ನಿರ್ಮಿಸಲಾಗುವುದು. ಪರಿಸರವನ್ನು ಸುಂದರವಾಗಿ ಹಾಗೂ ಸ್ವಚ್ಛವಾಗಿಡಲು ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ನಿಡಬೇಕು ಎಂದು ಮಹೋತ್ಸವದ ವಿಶೇಷಾಧಿಕಾರಿ ಬಿ.ಎನ್.ವರಪ್ರಸಾದ್ ರೆಡ್ಡಿ ಹೇಳಿದರು. ಪರಿಸರ ಅಧಿಕಾರಿ ವೆಂಕಟೇಶ್, ಆರೋಗ್ಯಾಧಿಕಾರಿ ಪುಟ್ಟಸ್ವಾಮಿ ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.