ರಾಣೆಬೆನ್ನೂರು: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ನನ್ನನ್ನು ‘ಗಿಡ್ಡ’ ಎಂದು ಲೇವಡಿ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ‘ಗಿಡ್ಡ’ನ ತಾಕತ್ತು ಏನೆಂದು ತೋರಿಸಿಕೊಡುತ್ತೇನೆ’ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದರು.
ಇಲ್ಲಿನ ಸಿದ್ದೇಶ್ವರನಗರ, ಕೋಟೆ ಪ್ರದೇಶದಲ್ಲಿ ಸೋಮವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡ ಪರ ಪ್ರಚಾರ ಮಾಡಿದ ಅವರು ಮಾತನಾಡಿದರು.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಇದರಲ್ಲಿ ಯಾವುದೇ ಸಂದೇಹವೇ ಇಲ್ಲ. ಕಾಂಗ್ರೆಸ್ ಸರ್ಕಾರವು ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿದೆ. ಬಿಜೆಪಿಯು ವಿರೋಧ ವ್ಯಕ್ತಪಡಿಸಿದೆ. ಬಿಜೆಪಿಯ ವಿರೋಧವನ್ನು ಎದುರಿಸಿದರೂ, ನಾಡಿನ ಸಾಮರಸ್ಯ ಕಾಪಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರಮಿಸಿದ್ದಾರೆ. ಹೀಗಾಗಿ, ಯಾರನ್ನು ಬೆಂಬಲಿಸಬೇಕು ಎಂದು ನಿರ್ಧರಿಸಿ ಎಂದರು.
ಬಿಜೆಪಿಗೆ ಮುಸ್ಲಿಮರ ಮತಗಳು ಬೇಕೇ ವಿನಾ, ಸಮುದಾಯದ ಅಭಿವೃದ್ಧಿ ಅಲ್ಲ. ಜಾತಿ, ಧರ್ಮ, ಜಯಂತಿಗಳ ಮೂಲಕ ಆತಂಕವಾದ ಸೃಷ್ಟಿಸುವ ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ಏಕೆ ಬೆಂಬಲಿಸಬೇಕು. ಸಾಮರಸ್ಯ, ಕರ್ನಾಟಕದ ಕೀರ್ತಿ ಸಾರಿದ ಕಾಂಗ್ರೆಸ್ಗೆ ಮತ ನೀಡಿ ಬೆಂಬಲಿಸಬೇಕು. ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂದು ಮನವಿ ಮಾಡಿದರು.
ಕೆಪಿಜೆಪಿ ಅಧ್ಯಕ್ಷ ಆರ್.ಶಂಕರ್ ಅವರು ಬೆಂಗಳೂರಿನಲ್ಲಿ ಲೂಟಿ ಮಾಡಿ, ಇಲ್ಲಿ ಚುನಾವಣೆಗೆ ಬಂದಿದ್ದಾರೆ. ಅವರು ಇಲ್ಲಿಗೇಕೆ ಬಂದರು ಎಂದು ಪ್ರಶ್ನಿಸಿದರು.
ಟಿಕೆಟ್ಗಾಗಿ ಬಿಜೆಪಿ ಮುಖಂಡರ ಬಾಗಿಲು ತಟ್ಟಿದರು. ಆದರೆ, ಬಾಗಿಲು ಮುಚ್ಚಿದ್ದ ಕಾರಣ ಕೆಪಿಜೆಪಿಗೆ ಸೇರಿದ್ದಾರೆ ಎಂದು ದೂರಿದರು.ಕೆ.ಪಿ.ಸಿ.ಸಿ. ಕಾರ್ಯದರ್ಶಿ ಪ್ರಕಾಶ ಕೋಳಿವಾಡ, ಟಿಪ್ಪುಸಾಬ್ ಕಲಕೋಟಿ, ಮರದ ಬಸನಗೌಡ, ಸಣ್ಣತಮ್ಮಪ್ಪ ಬಾರ್ಕಿ, ಪುಟ್ಟಪ್ಪ ಮರಿಯಮ್ಮನವರ, ಶರಿನ್ತಾಜ್ಶೇಖ್, ಇರ್ಷಾದ್ ಬಳ್ಳಾರಿ, ಇಕ್ಬಾಲ್ ಸಾಬ್ ರಾಣೆಬೆನ್ನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.