ADVERTISEMENT

ಕ್ಷಯರೋಗ ಪತ್ತೆ; 15 ದಿನ ಆಂದೋಲನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 5:30 IST
Last Updated 18 ಜುಲೈ 2017, 5:30 IST

ಕಲಬುರ್ಗಿ: ‘ಕ್ಷಯರೋಗ ನಿರ್ಮೂಲನೆಗಾಗಿ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಯಶಸ್ಸಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ ಮನವಿ ಮಾಡಿದರು. ಇಲ್ಲಿನ ಅಶೋಕ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಆಂದೋಲನ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಇಂದಿನಿಂದ 15 ದಿನ ಗ್ರಾಮೀಣ, ನಗರ, ಕೊಳಚೆ, ಗಣಿ ಪ್ರದೇಶಗಳು ಹಾಗೂ ಕ್ಷಯರೋಗಿಗಳು ಹೆಚ್ಚಾಗಿರುವ ಪ್ರದೇಶಗಳನ್ನು ಆಯ್ಕೆ ಮಾಡಿ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ಪತ್ತೆಯಾದ ರೋಗಿಗಳಿಗೆ ಕೂಡಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ ಮಾತನಾಡಿ, ‘ಕ್ಷಯರೋಗವನ್ನು ಪ್ರಾರಂಭದ ಹಂತದಲ್ಲಿ ಪತ್ತೆ ಹೆಚ್ಚಿ ಕೂಡಲೇ ಚಿಕಿತ್ಸೆ ಪ್ರಾರಂಭಿಸಬೇಕು. ಸತತವಾಗಿ 6 ತಿಂಗಳು ಔಷಧಿ ಸೇವಿಸಿದರೆ ಕ್ಷಯರೋಗವನ್ನು ಸಂಪೂರ್ಣವಾಗಿ ಗುಣಮುಖ ಮಾಡಬಹುದು. ಆದರೆ ರೋಗಿಗಳು 2-3 ತಿಂಗಳ ಔಷಧಿ ಸೇವಿಸಿ ಮುಂದಿನ ಔಷಧಿ ಸೇವಿಸದಿದ್ದರೆ ರೋಗ ಗುಣಮುಖವಾಗಲು ಕಷ್ಟಕರವಾಗುತ್ತದೆ’ ಎಂದರು.

ADVERTISEMENT

‘ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ದಿನ ಸತತವಾದ ಕೆಮ್ಮು, ಜ್ವರ, ಅದರಲ್ಲೂ ಸಂಜೆ ವೇಳೆ ಹೆಚ್ಚಾಗುವುದು ಮತ್ತು ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಹಸಿವೆ ಆಗದಿರುವುದು, ಕಫದಲ್ಲಿ ರಕ್ತ ಬೀಳುವಂತಹ ಲಕ್ಷಣಗಳು ಕಂಡ ಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಬೇಕು’ ಎಂದು ಹೇಳಿದರು.

ಆರ್‌ಸಿಎಚ್‌ ಅಧಿಕಾರಿ ಡಾ. ರುದ್ರವಾಡಿ, ಕ್ಷಯರೋಗ ಅಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ, ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಲೀಕರ್, ತಾಲ್ಲೂಕು ವೈದ್ಯಾಧಿಕಾರಿ ಡಾ. ರಾಜಕುಮಾರ, ಅಶೋಕ ನಗರದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಬಾಬುರಾವ್ ಚವಾಣ್, ಪಾಲಿಕೆ ಸದಸ್ಯ ಪರಶುರಾಮ ಹೋಳಕರ್, ವಿಠಲ ನಗರ ಶಾಂತಿ ಸಮಿತಿ ಸದಸ್ಯ ವಿ.ಆರ್. ಚಾಂಬಾಳ್, ಸುರೇಶ ಎಸ್. ದೊಡಮನಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.