ಅಫಜಲಪುರ: ಪಟ್ಟಣದಲ್ಲಿ ಕ್ರಿಯಾ ಯೋಜನೆ ಪ್ರಕಾರ ಚರಂಡಿ ನಿರ್ಮಾಣ ಮಾಡದಿರುವುದರಿಂದ ಚರಂಡಿ ನೀರು ಮುಖ್ಯರಸ್ತೆ ಮೇಲೆ ಹರಿಯುತ್ತಿದ್ದು, ಜನರು ಪರದಾಡುವಂತಾಗಿದೆ.
ಇದು ಅಂಬೇಡ್ಕರ್ ವೃತ್ತದಿಂದ ಹಳೆಯ ಪಟ್ಟಣ ಪಂಚಾಯಿತಿವರೆಗಿನ ಮುಖ್ಯರಸ್ತೆಯಾಗಿದ್ದು, ಪ್ರಮುಖ ವ್ಯಾಪಾರ ಕೇಂದ್ರವಾಗಿದೆ. ಈ ರಸ್ತೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. 5 ವರ್ಷಗಳ ಹಿಂದೆ ಈ ರಸ್ತೆಯನ್ನು 2 – 3 ಬಾರಿ ಚರಂಡಿ ನಿರ್ಮಿಸಿ ಡಾಂಬರೀಕರಣ ರಸ್ತೆ ಮಾಡಲಾಗಿದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ ವರ್ಷದಲ್ಲೇ ಎಲ್ಲವೂ ಕಿತ್ತು ಹೋಗಿದೆ. ಜನರು ಪ್ರಮುಖ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ.
ಈ ಕುರಿತು ಮಾಹಿತಿ ನೀಡಿದ ಪಟ್ಟಣದ ಮುಖಂಡರಾದ ಸಿದ್ದರಾಮಪ್ಪ ಮನ್ಮಿ, ಸದಾಶಿವ ಮೇತ್ರಿ, ಚಂದು ಕರಜಗಿ, ‘ಪುರಸಭೆಯವರು ಸ್ಥಳಕ್ಕೆ ಭೇಟಿ ನೀಡಿ ಚರಂಡಿ ನೀರು ನೇರವಾಗಿ ಮುಂದೆ ಹರಿದು ಹೋಗಲು ವ್ಯವಸ್ಥೆ ಮಾಡಬೇಕು. ಅದೇ ನೀರು ನಳದ ತಗ್ಗುಗಳಲ್ಲಿ ಬಂದು ಸೇರಿಕೊಳ್ಳುತ್ತಿರುವುದರಿಂದ ಅದೇ ನೀರನ್ನು ಕುಡಿಯುವಂತಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.