ಆಳಂದ: ತಾಲ್ಲೂಕಿನ ಚಿಂಚನಸೂರು ಪ್ರೌಢಶಾಲೆ ಶಿಕ್ಷಕ ಜಗದೀಶ್ವರಯ್ಯ ಅವರು ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾಗಿದ್ದು, ಅವರು ಶಾಲೆ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದಾರೆ.
ಶಾಲೆಯಲ್ಲಿ ಬಳಕೆ ಇಲ್ಲದ ಕೋಣೆಯನ್ನು ನವೀಕರಣಗೊಳಿಸಿರುವ ಅವರು ನವೀನ ಮಾದರಿಯ ಟೈಲ್ಸ್, ಪ್ಲಾಸ್ಟರ್, ಪಳಪಳಿಸುವ ನಲ್ಲಿ, ಪೈಪ್ ಹಾಕಿ ಸುಸಜ್ಜಿತಗೊಳಿಸಿದ್ದಾರೆ. ಶುದ್ಧ ಕುಡಿಯುವ ನೀರಿನ ಕೋಣೆ ನಿರ್ಮಿಸಿದ್ದಾರೆ. ಇದಕ್ಕಾಗಿ ಶಿಕ್ಷಕ ಜಗದೀಶ್ವರಯ್ಯ ಅವರು ₹ 56 ಸಾವಿರ ಸ್ವಂತ ಖರ್ಚು ಮಾಡಿದ್ದಾರೆ. ಮಕ್ಕಳ ದಿನಾಚರಣೆಗೆ ತಮ್ಮ ಶಾಲೆಯ ಮಕ್ಕಳಿಗೆ ಶಿಕ್ಷಕರು ಕಾಣಿಕೆಯಾಗಿ ನೀಡಿದ್ದಾರೆ.
ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕೋಣೆಯನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ಶರಣಗೌಡ ಪಾಟೀಲ ಮಾತನಾಡಿ ‘ವಿದ್ಯಾರ್ಥಿಗಳೊಂದಿಗೆ ಅನನ್ಯ ಸಂಬಂಧ ಶಿಕ್ಷಕರು ಹೊಂದಿದಾಗ ಮಾತ್ರ ಶಾಲಾ ವಾತಾವರಣ ಉತ್ತಮಗೊಳ್ಳುವುದು’ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲಯ್ಯ ಗುತ್ತೇದಾರ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಗೋರಖನಾಥ ಸಜ್ಜನ, ಮುಖಂಡ ಬಸವರಾಜ ಶಿವಗೋಳ, ಚನ್ನವೀರಯ್ಯ ಮಠ , ಉಮೇಶ ಹೆಬ್ಬಾಳ, ಮಹೇಂದ್ರಕುಮಾರ ಮಠಪತಿ, ರತ್ನಾಕರ ಸಪಕಾಳೆ, ನಾಗರಾಜ ದಂಡೋತಿ, ಮುಖ್ಯಗುರು ವಿನೋಧಕುಮಾರ, ಎಸ್ಡಿಎಂಸಿ ಅಧ್ಯಕ್ಷ ವಿರೂಪಾಕ್ಷಯ್ಯ ಬೋಧನ ಮತ್ತಿತರರು ಇದ್ದರು. ಮಕ್ಕಳ ದಿನಾಚರಣೆ ನಿಮಿತ್ತ ವಿದ್ಯಾರ್ಥಿನಿ ಸಂಧ್ಯಾ, ಶರಣಬಸಪ್ಪ ಮಾತನಾಡಿದರು. ಶಿಕ್ಷಕ ಜಯಭೀಮ ನಿರೂಪಿಸಿದರೆ, ಪ್ರಭಾವತಿ ಪಾಟೀಲ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.