ಗೋಣಿಕೊಪ್ಪಲು: ಕಳೆದ ಎರಡು ದಿನಗಳಿಂದ ಸಾಧಾರಣವಾಗಿ ಬೀಳುತ್ತಿರುವ ಮಳೆಗೆ ಕೃಷಿಕರು ತುಸು ಸಂತೋಷಗೊಂಡಿದ್ದಾರೆ. ಈ ಮಳೆಯಿಂದಾಗಿ ಕಾಲುವೆಗಳಲ್ಲಿ ಹರಿಯುತ್ತಿರುವ ನೀರನ್ನು ಬಳಸಿಕೊಂಡು ಭತ್ತ ನಾಟಿ ಮಾಡಲು ಮುಂದಾಗಿದ್ದಾರೆ.
ಪೊನ್ನಂಪೇಟೆ ಬಾಳೆಲೆ ನಡುವಿನ ನಲ್ಲೂರು ಗದ್ದೆ ಬಯಲು ಉತ್ತಮ ಭತ್ತ ಬೆಳೆಯುವ ಪ್ರದೇಶ. ಕೀರೆ ಹೊಳೆ ದಡದಲ್ಲಿರುವ ಗದ್ದೆ ಬಯಲಿಗೆ ಬರವೆಂಬುದೇ ಬಂದಿರಲಿಲ್ಲ. ಆದರೆ ಈ ಬಾರಿ ತೀವ್ರವಾಗಿ ಕಾಡುತ್ತಿದೆ. ಆದರೂ ಇಲ್ಲಿನ ರೈತರು ಮಳೆ ಬಂದಾಗ ರಸ್ತೆ ಬದಿಯಲ್ಲಿ ಹರಿಯುವ ನೀರನ್ನೇ ಸಂಗ್ರಹಿಸಿಕೊಂಡು ಭತ್ತ ಬೆಳೆಯಲು ಮುಂದಾಗಿದ್ದಾರೆ.
‘ಕೊಡಗಿನ ಕೃಷಿಕರಿಗೆ ನೀರಿನ ಬೆಲೆ ಗೊತ್ತಿರಲಿಲ್ಲ. ಮಳೆಗಾಲ ಬಂತೆಂದರೆ ಕೃಷಿಕರು ಅತಿವೃಷ್ಟಿ ಪರಿಹಾರಕ್ಕೆ ಅಲೆದಾಡುತ್ತಿದ್ದರು. ಆದರೆ ಕಳೆದ ಎರಡು ವರ್ಷದಿಂದ ಕೊಡಗಿನ ಹವಾಗುಣ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾಗಿದೆ. ಈಗ ಬರ ಪರಿಹಾರಕ್ಕೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದೆ’ ಎನ್ನುತ್ತಾರೆ ಇಲ್ಲಿನ ರೈತರು.
ತಿತಿಮತಿ, ಮಾಯಮುಡಿ, ಕೊಟ್ಟಗೇರಿ, ಬಾಳೆಲೆ , ನಿಟ್ಟೂರು ಭಾಗಗಳಲ್ಲಿ ಗದ್ದೆಗಳನ್ನು ಉಳುಮೆ ಮಾಡಲೂ ಸಾಧ್ಯವಾಗಿಲ್ಲ. ಕೊಡಗಿನ ಗಡಿಭಾಗಗಳಾಗಿರುವ ಈ ಗ್ರಾಮಗಳಿಗೆ ಸಹಜವಾಗಿಯೇ ಮಳೆ ಕಡಿಮೆ. ಈ ವರ್ಷವಂತೂ ಮತ್ತೂ ಇಳಿಮುಖವಾಗಿದೆ. ಈಬಾರಿ ಮೇ ತಿಂಗಳಿನಲ್ಲಿ ಬಿದ್ದ ಉತ್ತಮ ಮಳೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ನೀಗಿದೆ.
ದೇವರಪುರ, ತಿತಿಮತಿ ಭಾಗದಲ್ಲಿ ಗಿಡದಲ್ಲಿಯೇ ಒಣಗುತ್ತಿರುವ ಕಾಫಿಯನ್ನು ರಕ್ಷಿಸಲು ಕೆಲವರು ಕೆರೆಗಳಿಂದ ನೀರು ಹೊಡೆಯುತ್ತಿದ್ದಾರೆ. ಮಳೆ ಕೊರತೆಯಿಂದ ಈ ಭಾಗಗಳಲ್ಲಿ ಸಮೃದ್ಧಿಯಾಗಿ ಬೆಳೆಯುತ್ತಿದ್ದ ಭತ್ತದ ಗದ್ದೆಗಳು ಪಾಳುಬಿದ್ದಿದ್ದು, ಅದರಲ್ಲಿ ಕಾಫಿ, ಅಡಿಕೆ ಬೆಳೆಯಲು ಕೆಲವರು ಮುಂದಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.