ಕೋಲಾರ: ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ವಿಶ್ವಕರ್ಮ ಸಮುದಾಯದ ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯ ಅಭಿವೃದ್ಧಿಗೆ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕು ಎಂದು ಸಮುದಾಯದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ವಿಶ್ವಕರ್ಮ ಉತ್ಸವದ ಪ್ರಯುಕ್ತ ನಗರದ ಕಾಳಿಕಾಂಭ ಕಮ್ಮಟೇಶ್ವರ ದೇವಾಲಯದ ಮುಂಭಾಗ ಬುಧವಾರ ಉತ್ಸವಮೂರ್ತಿ ಮೆರವಣಿಗೆಗೆ ಚಾಲನೆ ನೀಡಿದ ಬಳಿಕ ಜಿಲ್ಲಾಧಿಕಾರಿ ಡಿ.ಕೆ.ರವಿ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲೆಯಲ್ಲಿ ಸುಮಾರು 35ರಿಂದ 40 ಸಾವಿರಕ್ಕೂ ಹೆಚ್ಚಿರುವ ವಿಶ್ವಕರ್ಮ ಸಮುದಾಯ ಧಾರು ಕೆಲಸ (ಬಡಗಿ), ಕಮ್ಮಾರಿಕೆ, ಎರಕದ ಕೆಲಸ, ರಥ ಶಿಲ್ಪ, ಆಭರಣ ಶಿಲ್ಪ, ಭವ್ಯ ವಿಗ್ರಹಗಳ ಕೆತ್ತನೆ ಕೆಲಸ, ದೇವಾಲಯದ ನಿರ್ಮಾಣ ಕಾಯಕ ಮಾಡುತ್ತಿದೆ. ಆದರೆ ಅವರ ವೃತ್ತಿಗೆ ದೊರಕುತ್ತಿರುವ ನೆರವು ಕಡಿಮೆ ಎಂದರು.
ನೆಲೆ ಇಲ್ಲ: ಜಿಲ್ಲೆಯಲ್ಲಿ ಶಿವಾರಪಟ್ಟಣ, ಅನಂತಪುರ ಸೇರಿದಂತೆ ಹಲವೆಡೆ ಕಮ್ಮಾರಿಕೆ, ಶಿಲ್ಪ ಕೆತ್ತನೆ ಮತ್ತು ಬಡಗಿ ಕೆಲಸ ಮಾಡುವವರಿಗೆ ಸ್ಥಿರವಾದ ನೆಲೆಯಿಲ್ಲದೇ ರಸ್ತೆ ಬದಿ, ಮರದ ಕೆಳಗೆ ಕೆಲಸ ಮಾಡುವ ಪರಿಸ್ಥಿತಿ ಇದೆ. ಜಿಲ್ಲಾಡಳಿತ ಕೂಡಲೇ ಅವರ ನೆರವಿಗೆ ಬರಬೇಕು. ಅಮರಶಿಲ್ಪಿ ಜಕಣಾಚಾರಿ ಅವರ ಪುತ್ಥಳಿಯನ್ನು ವಿಧಾನಸೌಧದ ಪ್ರಾಂಗಣದಲ್ಲಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ವಿಶ್ವಕರ್ಮ ಸಮುದಾಯಗಳ ನಿಗಮಕ್ಕೆ ವಿಶ್ವಕರ್ಮರಲ್ಲಿಯೇ ಒಬ್ಬರನ್ನು ಅಧ್ಯಕ್ಷರನ್ನಾಗಿ ಹಾಗೂ ಸದಸ್ಯರುಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ನೇಮಕ ಮಾಡಬೇಕು.
ವಾಲ್ಮೀಕಿ ಜಯಂತಿ, ಕನಕ ಜಯಂತಿ ಮಾದರಿಯಲ್ಲಿ ಸೆಪ್ಟೆಂಬರ್ 17 ರಂದು ವಿಶ್ವಕರ್ಮ ದಿನಾಚರಣೆಗೆ ಸರ್ಕಾರಿ ರಜೆ ಘೋಷಿಸಬೇಕು.
ವಿಶ್ವಕರ್ಮ ಜನಾಂಗವನ್ನು ಪ್ರವರ್ಗ 1 ಕ್ಕೆ ಸೇರಿಸಿ, ಶೇ 4ರಷ್ಟು ಮೀಸಲಾತಿ ನೀಡಬೇಕು. ಚಿನ್ನ ಬೆಳ್ಳಿ ಕೆಸಲಗಾರರಿಗೆ ಪೊಲೀಸರಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ಕಾನೂನು ತಿದ್ದುಪಡಿ ತರಬೇಕು. ವಿಶ್ವಕರ್ಮ ಜನಾಂಗದ ಕನಿಷ್ಠ ಇಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಕಲಾವಿದ ವಿಷ್ಣು, ಕೆ.ವಿ.ಜಗದೀಶ್ವರಾಚಾರ್ಯ, ಎ.ರುದ್ರಪ್ಪ, ಎಸ್.ಪುಟ್ಟಸ್ವಾಮಾಚಾರ್ಯ, ಪ್ರಭಾಕರಾಚಾರ್ಯ, ನಂದನ್ ಕುಮಾರ್, ಹರಿಪ್ರಕಾಶ್, ಕೆ.ಎಸ್.ಸುಬ್ಬರಾಯಚಾರ್ಯ, ಕೆ.ಎನ್.ಮುರಳಿ, ಮಂಜುನಾಥ್, ಈಶ್ವರಾಚಾರ್ಯ,ಎಸ್.ವಾಸುದೇವಾಚಾರ್ಯ, ಎನ್.ಮಲ್ಲಿಕಾರ್ಜುನಾಚಾರ್ಯ, ಶಿಲ್ಪಿ ಸೋಮಶೇಖರಾಚಾರ್ಯ, ಜಿ.ಎಂ.ಗೋಪಿಕೃಷ್ಣ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.