ಮಂಡ್ಯ: ಎಐಸಿಸಿ ಸಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ತಮ್ಮ ಜನ್ಮದಿನದ ಅಂಗವಾಗಿ ಬುಧವಾರ ನಗರಕ್ಕೆ ಭೇಟಿ ನೀಡುತ್ತಾರೆ ಎಂಬ ಸುದ್ದಿ ಹರಡಿದ್ದ ಕಾರಣ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ನಿರಾಸೆ ಅನುಭವಿಸಿದರು.
ರಮ್ಯಾ ನ.28ರಂದು ಸಂಜೆಯೇ ಬರುತ್ತಾರೆ ಎಂಬ ಮಾಹಿತಿ ಪಡೆದು ಬೆಂಗಳೂರು, ಬೆಳಗಾವಿ ಸೇರಿ ವಿವಿಧ ಜಿಲ್ಲೆಗಳ ಮಹಿಳಾ ಘಟಕದ ಕಾರ್ಯಕರ್ತರು ನಗರಕ್ಕೆ ಬಂದಿದ್ದರು. ಬುಧವಾರ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ಸಭೆ ಆಯೋಜನೆಗೊಂಡಿತ್ತು. ಸಭೆಗೆ ಬಂದವರೆಲ್ಲರೂ ರಮ್ಯಾ ಅವರನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದರು. ಆದರೆ ರಮ್ಯಾ ಬಾರದ ಕಾರಣ ನಿರಾಶರಾದರು.
‘ರಮ್ಯಾ ನ.28ರಂದು ಸಂಜೆ ಬರುವುದಾಗಿ ತಿಳಿಸಿದ್ದರು. ಆದರೆ ಗುಜರಾತ್ನಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಒತ್ತಡವಿದೆ, ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು. ಇಲ್ಲಿ ನಾವು ಎಲ್ಲಾ ವ್ಯವಸ್ಥೆ ಮಾಡಿಕೊಂಡಿದ್ದೆವು. ನೂರಾರು ಪೂರ್ಣಕುಂಭಗಳೊಂದಿಗೆ ಮೆರವಣಿಗೆ ಮೂಲಕ ಅವರಿಗೆ ಸ್ವಾಗತ ಕೋರಲು ಅಣಿಯಾಗಿದ್ದೆವು. ಅವರು ಬಾರದಿದ್ದರೂ ನಾವೇ ಕೇಕ್ ಕತ್ತರಿಸಿ ಜನ್ಮದಿನ ಆಚರಣೆ ಮಾಡಿದೆವು’ ಎಂದು ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಹೇಳಿದರು.
ವಿದ್ಯಾನಗರದಲ್ಲಿರುವ ವಿದ್ಯಾ ಗಣಪತಿ ದೇವಾಲಯದಲ್ಲಿ ರಮ್ಯಾ ಅವರ ಹೆಸರಿನಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದಲ್ಲಿ ಕೇಕ್ ಕತ್ತರಿಸಿ ಅವರ ಜನ್ಮದಿನ ಆಚರಿಸಿದರು. ಅಲ್ಲದೆ ಹಳೇಬೂದನೂರಿನ ಗಣಪತಿ ದೇವಾಲಯದಲ್ಲೂ ಪೂಜೆ ಸಲ್ಲಿಸಿ ಜನ್ಮದಿನ ಆಚರಣೆ ಮಾಡಲಾಯಿತು.
ಜಿಲ್ಲಾಸ್ಪತ್ರೆಯ ರೋಗಿಗಳಿಗೆ ಸಿಹಿ, ಹಣ್ಣು ವಿತರಣೆ ಮಾಡಲಾಯಿತು. ಸೇವಾಕಿರಣ ವೃದ್ಧಾಶ್ರಮಕ್ಕೆ ತೆರಳಿ ವೃದ್ಧರಿಗೆ ಊಟದ ವ್ಯವಸ್ಥೆ ಮಾಡಿಸಲಾಗಿತ್ತು. ಅವರಿಗೆ ಸೀರೆ ವಿತರಣೆ ಮಾಡಲಾಯಿತು. ನಗರದ ವಿವಿಧೆಡೆ ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿದ್ದವು.
ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕಿಗೆ ಜನ್ಮದಿನದ ಶುಭಾಶಯ ಹೇಳುವ ಬ್ಯಾನಗರ್ ಪ್ರದರ್ಶನ ಮಾಡಿದ್ದರು. ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ, ನೂರು ಅಡಿ ರಸ್ತೆ, ವಿವಿ ರಸ್ತೆ, ಆರ್ಪಿ ರಸ್ತೆಗಳಲ್ಲಿ ಬ್ಯಾನರ್ ಕಟೌಟ್ ಹಾಕಲಾಗಿತ್ತು. ರಮ್ಯಾ ಅವರ ನಿವಾಸದ ರಮ್ಯಾ ಭಾವಚಿತ್ರದ ಬೃಹತ್ ಕಟೌಟ್ ಹಾಕಲಾಗಿತ್ತು.
ಜನ್ಮ ದಿನಾಚರಣೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ, ರಮ್ಯಾ ಅಭಿಮಾನಿಗಳ ಸಂಘದ ಅಧ್ಯಕ್ಷ ಶಶಿಕುಮಾರ್, ಶುಭದಾಯಿತಿನಿ, ವಿಜಯಲಕ್ಷ್ಮಿ ರಘುನಂದನ್, ನಾಗಮಣಿ, ಚಂದ್ರಕಲಾ, ಸರ್ವಮಂಗಳಾ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.