ADVERTISEMENT

ಅಕ್ರಮ ಕಟ್ಟಡ ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2015, 13:54 IST
Last Updated 19 ಏಪ್ರಿಲ್ 2015, 13:54 IST

ರಾಯಚೂರು: ನಗರದ ಹೃದಯ ಭಾಗದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಪ್ರಮುಖ ರಸ್ತೆಗಳನ್ನು ಅಗಲೀಕರಣ ಮಾಡುವಂತೆ ವೀರ ಸಾವರ್ಕರ್‌ ಯುವಕ ಸಂಘ ಜಿಲ್ಲಾಡಳಿತ ಮತ್ತು ನಗರಸಭೆಯನ್ನು ಒತ್ತಾಯಿಸಿದೆ.

ಅಕ್ರಮ ಕಟ್ಟಡಗಳನ್ನು ಜಿಲ್ಲಾಡಳಿತ ಮತ್ತು ನಗರಸಭೆ ತೆರವುಗೊಳಿಸುತ್ತಿರುವುದು ಶ್ಲಾಘನೀಯ ಕಾರ್ಯ. ಆದರೆ, ಈ ಕಾರ್ಯವನ್ನು ಮೊದಲು ನಗರದ ಪ್ರಮುಖ ರಸ್ತೆಗಳಾದ ತೀನ್‌ ಕಂದಿಲ್‌ ವೃತ್ತದಿಂದ ಬಸ್‌ ನಿಲ್ದಾಣದವರೆಗೆ, ಇದೇ ವೃತ್ತದಿಂದ ಅಶೋಕ ಡಿಪೊವರೆಗೆ, ತೀನ್‌ ಕಂದಿಲ್‌ ವೃತ್ತದಿಂದ ಗಾಂಧೀಜಿ ವೃತ್ತದವರೆಗೆ ಮತ್ತು ಇದೇ ವೃತ್ತಿಂದ ಫಾರೂಕ್‌ ಅನ್ವರ್‌ ವೃತ್ತದವರೆಗೆ ಮಾಡಬೇಕು ಎಂದು ಸಂಘ ಆಗ್ರಹಿಸಿದೆ.

ಮನೆಗಳನ್ನು ತೆರವುಗೊಳಿಸುವುದಕ್ಕೂ ಮೊದಲು ರಸ್ತೆ ಮತ್ತು ಕಾಲುವೆ ನಿರ್ಮಾಣ ಮಾಡಬೇಕು. ಮನೆಗಳನ್ನು ಮೊದಲು ತೆರವುಗೊಳಿಸಿದರೆ ಬಡವರಿಗೆ ಜೀವನ ನಡೆಸಲು ಕಷ್ಟವಾಗುತ್ತದೆ. ನಗರದ ಮಾಸ್ಟರ್‌ ಪ್ಲಾನ್‌ನಂತೆ ಸುಪ್ರೀಂ ಕೋರ್ಟ್‌ ಆದೇಶಾನುಸಾರ ಎಲ್ಲ ರೀತಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಬೇಕು. ತಾರತಮ್ಯ ಕಂಡುಬಂದರೆ ಸಂಘದ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.