ಲಿಂಗಸುಗೂರು: ‘ಪೊಲೀಸ್ ಇಲಾಖೆಯ ಎಲ್ಲ ಸಿಬ್ಬಂದಿ ತಮ್ಮ ಕರ್ತವ್ಯಗಳ ಜತೆಗೆ ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳಬೇಕು. ಸ್ವಚ್ಛತೆ ಹಾಗೂ ಗಿಡ ನೆಡುವ ಜತೆಗೆ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಬೇಕು’ ಎಂದು ಸಿಪಿಐ ವಿ.ಎಸ್ ಹಿರೇಮಠ ಹೇಳಿದರು.
ಭಾನುವಾರ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮನೆ ಸುತ್ತಮುತ್ತ, ರಸ್ತೆಗುಂಟ ಗಿಡಮರಗಳನ್ನು ಬೆಳೆಸುವುದರಿಂದ ಹಾಗೂ ಸ್ವಚ್ಛತೆ ಕಾಪಾಡುವುದರಿಂದ ಆಗುವ ಲಾಭಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಜತೆಗೆ ಎಲ್ಲರೂ ತಮ್ಮ ಮನೆ, ಮನೆಯ ಆವರಣ, ಸುತ್ತಮುತ್ತಲ ಪರಿಸರ, ವಾರ್ಡ್, ಗ್ರಾಮ ಸ್ವಚ್ಛತೆಗೆ ಪರಸ್ಪರ ಸಹಕಾರ ನೀಡಬೇಕು’ ಎಂದರು.
‘ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಒತ್ತಡ ಇರುವುದು ಸಹಜ. ಅವುಗಳ ಮಧ್ಯೆ ಇಂತಹ ಸಾಮಾಜಿಕ ಕಳಕಳಿಯ ಸೇವೆಗಳನ್ನು ಮಾಡುವುದರಿಂದ ಜನಸಾಮಾನ್ಯರ ಮಧ್ಯೆ ಸ್ನೇಹಮಯ ವಾತಾವರಣ ನಿರ್ಮಿಸಲು ಸಾಧ್ಯ.
ಸೇವಾ ಮನೋಭಾವ ಮೈಗೂಡಿಸಿಕೊಂಡಲ್ಲಿ ಒತ್ತಡದಿಂದ ದೂರ ಉಳಿಯಬಹುದಾಗಿದೆ’ ಎಂದರು.ಪಿಎಸ್ಐ ದಾದಾವಲಿ ಮಾತನಾಡಿ, ‘ಇಲಾಖೆಯಲ್ಲಿ ಶಿಸ್ತಿನಿಂದ ಕೆಲಸ ಮಾಡುವ ಸಿಬ್ಬಂದಿ ಸಮಾಜದಲ್ಲಿ ಕೂಡ ಮಾದರಿಯಾಗಿರಬೇಕು.
ಕರ್ತವ್ಯದ ಜತೆಗೆ ಜತೆಗೆ ಬೀಟ್ ಕೆಲಸಗಳಲ್ಲಿ ಇಂತಹ ಸಾಮಾಜಿಕ ಕೆಲಸದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಬೇಕು’ ಮನವಿ ಮಾಡಿದರು. ಲಿಂಗಸುಗೂರು ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.