ADVERTISEMENT

ಪೌರಕಾರ್ಮಿಕರಿಗೆ ಗೌರವ ಪುರಸಭಾಧ್ಯಕ್ಷೆ ಮನವಿ

ಅನನ್ಯ ಫೌಂಡೇಷನ್ ವತಿಯಿಂದ ಸ್ವೆಟರ್ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 11:50 IST
Last Updated 2 ಜನವರಿ 2017, 11:50 IST

ಮಾಗಡಿ: ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಚಳಿಗಾಳಿ ಮಳೆ ಗಮನಿಸದೆ ನಿರಂತರವಾಗಿ ಕಸದೊಂದಿಗೆ ತಮ್ಮ ಬದುಕನ್ನು ಸವೆಸುತ್ತಿರುವ ಪೌರಕಾರ್ಮಿಕರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಪುರಸಭಾಧ್ಯಕ್ಷೆ ಹೊಂಬಮ್ಮ ಹೇಳಿದರು.

ಪುರಸಭೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅನನ್ಯ ಫೌಂಡೇಷನ್ ವತಿಯಿಂದ 58 ಪೌರ ಕಾರ್ಮಿಕರಿಗೆ ಸ್ವೆಟರ್ ವಿತರಿಸಿ  ಅವರು ಮಾತನಾಡಿದರು,
ಪಟ್ಟಣದ ಸ್ವಚ್ಛತೆಯನ್ನು ಒಂದು ವಾರ ಪೌರಕಾರ್ಮಿಕರು ಕಾಪಾಡದಿದ್ದರೆ ಅದನ್ನು ನೆನೆಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂಥ ಪೌರಕಾರ್ಮಿಕರಿಗೆ ಅನನ್ಯ ಫೌಂಡೇಷನ್ ವತಿಯಿಂದ ಸ್ವೆಟರ್ ವಿತರಿಸುತ್ತಿರುವುದು ಉತ್ತಮ ಕೆಲಸವಾಗಿದೆ. ಪೌರಕಾರ್ಮಿಕರು ಪಟ್ಟಣದ  ಸ್ವಚ್ಛತೆ  ಜೊತೆಗೆ  ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ  ತಿಳಿಸಿದರು.

ಅನನ್ಯ ಫೌಂಡೇಷನ್ ಅಧ್ಯಕ್ಷ ಸುನಿಲ್ ಮಾತನಾಡಿ, ಉಳ್ಳ ದಾನಿಗಳಿಂದ ಪಡೆದು ಅವಶ್ಯಕತೆ ಇರುವವರಿಗೆ ಕೊಡುವ ಸೇತುವೆಯಾಗಿ ಅನನ್ಯ ಫೌಂಡೇಷನ್ ಕಾರ್ಯ ನಿರ್ವಹಿಸುತ್ತಿದೆ. ಮಹಾತ್ಮ ಗಾಂಧೀಜಿ ಅವರು ಸ್ವಚ್ಛ ಭಾರತದ ಕನಸು  ಕಂಡವರು. ಅವರ ಕನಸನ್ನು ಪ್ರತಿ ದಿನ ನನಸು ಮಾಡುತ್ತಿರುವ ಪೌರಕಾರ್ಮಿಕರನ್ನು ಕಂಡರೆ ಕೈ ಮುಗಿಯಬೇಕು ಎಂದರು.

ಪ್ರತಿ ದಿನ ಬೆಳಿಗ್ಗೆ 4 ಗಂಟೆಗೆ ಪಟ್ಟಣವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಇಳಿಯುವ ಪೌರ ಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅನನ್ಯ ಫೌಂಡೇಷನ್ ಸ್ಪೆಟರ್ ಕೊಡುವ ಮೂಲಕ ಸ್ವಲ್ಪ ಮಟ್ಟಿಗೆ ನೆರವಾಗಿದ್ದೇವೆ ತಿಳಿಸಿದರು.

ಪುರಸಭೆ ಸದಸ್ಯ ಕೆ.ವಿ.ಬಾಲು ಮಾತನಾಡಿ, ‘19ನೇ ವಾರ್ಡ್‌ನಲ್ಲಿ ಯಾವುದಾದರೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಅನನ್ಯ ಫೌಂಡೇಷನ್ ತಿಳಿಸಿತ್ತು. ಆದರೆ ನಾನೇ ಒಂದೇ ವಾರ್ಡ್‌ಗೆ ಸೌಲಭ್ಯ ಕೊಡುವುದಕ್ಕಿಂತ ಇಡೀ ಮಾಗಡಿ ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸೌಲಭ್ಯ ಕೊಟ್ಟರೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದೆ ಎಂದರು.

ಮುಂದಿನ ದಿನಗಳಲ್ಲಿ ಪುರಸಭೆ ವ್ಯಾಪ್ತಿಯ ವಾಟರ್ ಮ್ಯಾನ್‌ಗಳಿಗೂ ವಿತರಣೆ ಮಾಡಲಾಗುವುದೆಂದು ತಿಳಿಸಿದರು. ಫೌಂಡೇಷನ್‌ಗೆ ಪುರಸಭೆ ವತಿಯಿಂದ ಅಭಿನಂದನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಚಂದ್ರಬಾಬು, ಪುರಸಭೆ ಸದಸ್ಯರಾದ ಎಂ.ಎನ್.ಮಂಜು, ಶಿವಕುಮಾರ್, ಮಹೇಶ್, ಮಹದೇವ್, ರಿಯಾಜ್, ರಘು, ಬಸವರಾಜು, ನಯಾಜ್, ಫೌಂಡೇಶನ್‌ನ ರವಿ, ಬಿಜೆಪಿ ಶಂಕರ್ ಸೇರಿದಂತೆ ಪುರಸಭೆ ಸಿಬ್ಬಂದಿ ಕುಸುಮ, ಸುಷ್ಮಾ, ಮೀಸೆ ನಾಗಣ್ಣ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.