ಮಾಗಡಿ: ವರನಟ ಡಾ.ರಾಜ್ ಕುಮಾರ್ ಕನ್ನಡ ನಾಡಿನ ಸಾಂಸ್ಕೃತಿಕ ಪರಂಪರೆಯ ಮಹಾಬೆಳಕು ಎಂದು ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಕಲ್ಯಾಬಾಗಿಲು ನಾರಸಿಂಹ ಸರ್ಕಲ್ನಲ್ಲಿ ಮಂಗಳವಾರ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನಡೆದ ಅವರ 90ನೇ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘ಬೇಡರ ಕಣ್ಣಪ್ಪ, ಸತ್ಯ ಹರಿಶ್ಚಂದ್ರ, ಬಂಗಾರದ ಮನುಷ್ಯ, ಸಾಕ್ಷಾತ್ಕಾರ, ಬಬ್ರುವಾಹನ, ಮಯೂರ ಸಿನಿಮಾಗಳಲ್ಲಿ ಯುವ ಜನರಿಗೆ ಬದುಕಿನ ಮಹತ್ವ ಹಾಗೂ ನೈತಿಕ ಮೌಲ್ಯಗಳನ್ನು ಕಲೆ ಮೂಲಕ ತೋರಿಸಿಕೊಟ್ಟ ಸಜ್ಜನಿಕೆಯ ನಟ. ಅವರ ಆದರ್ಶ ನಾವೆಲ್ಲರೂ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ’ ಎಂದು ಸ್ಮರಿಸಿದರು.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಗಂಗಣ್ಣ ಮಾತನಾಡಿ, ಡಾ.ರಾಜ್ ಬದುಕು ಮತ್ತು ಚಿತ್ರರಂಗದಲ್ಲಿ ಅವರ ನೈತಿಕತೆ ಕನ್ನಡಿಗರಿಗೆ ಮರೆಯಲಾರದ ಮಹತ್ವದ ಸಂಪತ್ತಾಗಿದೆ ಎಂದರು.
ಕನ್ನಡ ಪರ ಹೋರಾಟಗಾರ ಎಂ.ಆರ್.ಬಸವರಾಜು ಈಡಿಗ ಮಾತನಾಡಿ, ಗುಬ್ಬಿವೀರಣ್ಣ ಅವರ ನಾಟಕ ಕಂಪನಿಯಲ್ಲಿ ಪಾತ್ರಾಭಿನಯ ಮಾಡುವ ಮೂಲಕ ಕನ್ನಡ ನಾಡಿನ ಕಲೆ ಮಹತ್ವ ಅರಿತು ಅದರಂತೆ ಬದುಕಿದರು. ಗೋಕಾಕ್ ಚಳವಳಿಯಲ್ಲಿ ಪಾಲ್ಗೊಂಡು ನಿಸ್ವಾರ್ಥ ಹೋರಾಟಗಾರರಾಗಿ ಕನ್ನಡ ನಾಡು ನುಡಿ ರಕ್ಷಣೆಗೆ ದುಡಿದ ಮಹನೀಯ ಎಂದರು.
ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಗೌರವಾಧ್ಯಕ್ಷ ಎಂ.ಎನ್.ಜಯರಾಮ್, ಆರ್.ಚಂದ್ರಶೇಖರ್, ಆರ್.ಪುಟ್ಟಸ್ವಾಮಿ ಈಡಿಗ, ಎಂ.ಎಚ್.ರಂಗನಾಥ್, ಜುಟ್ಟನಹಳ್ಳಿ ಮಾರೇಗೌಡ, ಎಂ.ಎನ್.ವಾಸು, ವಿನಯಕುಮಾರ್, ಸಿದ್ದರಾಜು, ರೇಣುಕಾ, ಮಂಜುನಾಥ, ಬಿ.ಎನ್.ಶಿವು, ಅಂಗಡಿ ಚಂದ್ರು, ಲೋಕೇಶ್, ಎಂ.ಎನ್.ವೇಣುಗೋಪಾಲ್, ಡಿಂಗ್ರಿ ನರಸಿಂಹಮೂರ್ತಿ, ರೈತ ಸಂಘದ ಬಿ.ನಂಜುಂಡಯ್ಯ, ಚಕ್ರಬಾವಿ ರಾಜಣ್ಣ, ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ್ ಮಾತನಾಡಿದರು.ಆಟೊ, ಟೆಂಪೊ ಚಾಲಕರು ಮತ್ತು ನೂರಾರು ರಂಗ ಕಲಾವಿದರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.