ADVERTISEMENT

ದುರಸ್ತಿ ಕಾಮಗಾರಿ ಕಳಪೆ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 8:49 IST
Last Updated 6 ಸೆಪ್ಟೆಂಬರ್ 2017, 8:49 IST

ಹೊಳೆಹೊನ್ನೂರು: ಸಮೀಪದ ಆನವೇರಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ದುರಸ್ತಿ ಕಾಮಗಾರಿಗಳು ಕಳಪೆಯಾಗಿವೆ ಎಂದು ಆರೋಪಿಸಿ ಸ್ಥಳೀಯರು ಮಂಗಳವಾರ ಪ್ರತಿಭಟನೆ ನಡೆಸಿ ಕಾಮಗಾರಿ ತಡೆದರು.

ಆನವೇರಿಯ ಹಿರಿಮಾವುರದಮ್ಮ ಬೆಟ್ಟದ ಮೇಲಿರುವ ವಸತಿ ಶಾಲೆಯ ಕಾಂಪೌಂಡ್ ನಿರ್ಮಾಣ ಸಂಪೂರ್ಣವಾಗಿ ಕಳಪೆಯಾಗಿದೆ. ಕಟ್ಟಡದ ಸಿಮೆಂಟ್‌ಗೆ ನಿಯಮಿತವಾಗಿ ನೀರು ಚಿಮುಕಿಸುತ್ತಿಲ್ಲ ಎಂದು ಕಟ್ಟಡ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಂಜಿನಿಯರ್‌ರನ್ನು ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರು ಸ್ಥಳಕ್ಕೆ ಬರುವವರೆಗೆ ಕೆಲಸ ಮಾಡದಂತೆ ಹೇಳಿ ಕಾರ್ಮಿಕರನ್ನು ವಾಪಸ್ ಕಳಿಸಿದರು.

ಕಾಮಾಗಾರಿಯಲ್ಲಿ ನಿತ್ಯ ಬೆರಳೆಣಿಕೆಯಷ್ಟು ಮಂದಿ ಕೆಲಸಮಾಡಿದರೆ ಕಾಮಗಾರಿ ಮುಗಿಯುವುದು ತಡವಾಗುತ್ತದೆ. ವಸತಿ ಶಾಲೆ ಗುಡ್ಡಗಾಡು ಪ್ರದೇಶದಲ್ಲಿದ್ದು, ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಆದಷ್ಟು ಬೇಗನೆ ಕಾಂಪೌಂಡ್ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಚಂದ್ರಶೇಖರಪ್ಪ ಗೌಡ, ಎಂ.ದಾನೇಶ್, ಶಿವರಾಜ್, ನಾಗರಾಜ್, ಶಿವಮೂರ್ತಿ, ಬಾಲಕೃಷ್ಣ ಇದ್ದರು.

ADVERTISEMENT

‘ಮಂಗಳೂರು ಚಲೊ’ ಬೈಕ್‌ ರ‍್ಯಾಲಿ 6ರಂದು
ತೀರ್ಥಹಳ್ಳಿ: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ‘ಮಂಗಳೂರು ಚಲೊ’ ಬೈಕ್‌ ರ‍್ಯಾಲಿ ಸೆ.6ರಂದು ತೀರ್ಥಹಳ್ಳಿ ಪಟ್ಟಣಕ್ಕೆ ಬೆಳಿಗ್ಗೆ 11ಕ್ಕೆ ಬರಲಿದೆ. ‘ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿ, ನಿರಂತರವಾಗಿ ನಡೆಯುತ್ತಿರುವ ಸಂಘ ಪರಿವಾರದ ಕಾರ್ಯಕರ್ತರ ಕಗ್ಗೊಲೆ ಖಂಡಿಸಿ ಹಾಗೂ ಪ್ರಕರಣದ ತನಿಖೆ ನಡೆಸುವುದು ಮತ್ತು ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡು ರ‍್ಯಾಲಿ ಯಶಸ್ವಿಗೊಳಿಸಬೇಕು’ ಎಂದು ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಘಟಕ ಪ್ರಕಟಣೆಯಲ್ಲಿ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.