ADVERTISEMENT

‘ಅರಣ್ಯ ನಾಶದಿಂದ ಪ್ರಾಕೃತಿಕ ವಿಕೋಪ’

ವನಮಹೋತ್ಸವ, ಸ್ವಚ್ಛತಾ ಕಾರ್ಯಕ್ರಮದಲ್ಲಿ ಅಜಯಕುಮಾರ್‌

​ಪ್ರಜಾವಾಣಿ ವಾರ್ತೆ
Published 7 ಜುಲೈ 2015, 6:26 IST
Last Updated 7 ಜುಲೈ 2015, 6:26 IST

ಸೊರಬ: ‘ಅರಣ್ಯ ನಾಶದಿಂದಾಗಿ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ’ ಎಂದು ವಲಯ ಅರಣ್ಯಾಧಿಕಾರಿ ಎಂ.ಎಸ್.ಅಜಯಕುಮಾರ್ ತಿಳಿಸಿದರು. ಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಈಚೆಗೆ ಯುವ ಹೋರಾಟ ಸಮಿತಿ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕ ಇಲಾಖೆಯ ಸಹಯೋಗದಲ್ಲಿ ನಡೆದ ವನಮಹೋತ್ಸವ ಹಾಗೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅರಣ್ಯದ ಅಸಮತೋಲನ ಹೆಚ್ಚುತ್ತಿರುವುದರಿಂದ ಬಹುತೇಕ ರಾಜ್ಯಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿ, ಮಾನವನಿಗೆ ಭಯ ಹುಟ್ಟಿದೆ. ಪ್ರಕೃತಿ ನಮಗೆ ಉತ್ತಮ ಗಾಳಿ, ವಾತಾವರಣ ನೀಡುತ್ತಿದ್ದರೂ, ವ್ಯಕ್ತಿ ಮಾತ್ರ ಪ್ರಕೃತಿಗೆ ಪೂರಕವಾಗಿ ಯಾವ ಕೊಡುಗೆ ನೀಡುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ನಮ್ಮ ಸುತ್ತ–ಮುತ್ತಲಿನ ಪರಿಸರದಲ್ಲಿ ಸಸಿ ನೆಡುವ ಮೂಲಕ ಪರಿಸರ ಉಳಿಸಬೇಕು’ ಎಂದು ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಗಣೇಶಪ್ಪ ಮಾತನಾಡಿ, ಈಗಾಗಲೇ ಜಗತ್ತಿನ ಹಲವಾರು ಪ್ರಾಣಿಗಳು ವಿನಾಶ ಹೊಂದಿ, ಕೇವಲ ಪುಸ್ತಕದ ಚಿತ್ರಗಳಾಗಿ ಉಳಿದಿವೆ. ಇಂದು ಪರಿಸರವನ್ನು ಉಳಿಸಿ ರಕ್ಷಣೆ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಕಾಡು ಹಾಗೂ ಅರಣ್ಯ ಸಂಪತ್ತನ್ನು ಮಕ್ಕಳಿಗೆ ಪುಸ್ತಕದಲ್ಲಿ ತೋರಿಸುವ ದಿನಗಳು ಎದುರಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು. ನಾಗರಾಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಯುವ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಡೆ ಸಂಸ್ಥಾನ ಮಠದ ಡಾ.ಮಹಾಂತಸ್ವಾಮಿ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಿಂಚನಾ ಪಾರ್ಥಿಸಿದರು. ಮಹೇಶಗೌಳಿ ಸ್ವಾಗತಿಸಿದರು. ನೆಮ್ಮದಿ ಸುಬ್ಬು ವಂದಿಸಿದರು.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪ್ರಶಾಂತ ಮೇಸ್ತ್ರಿ, ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಮಂಚಿ ಹನುಮಂತಪ್ಪ, ಎಂ.ಡಿ.ಉಮೇಶ್, ಪಾಣಿ ರಾಜಪ್ಪ, ಮಹೇಶ್ವರಪ್ಪ, ದಿನಕರ್ ಭಟ್ ಭಾವೆ, ಡಾ.ನಾಗೇಂದ್ರಪ್ಪ, ನಟರಾಜ್, ರಾಜಪ್ಪ ಮಾಸ್ತರ್, ಮಂಜುನಾಥ, ರೇವಣಕುಮಾರ್, ಅಣ್ಣಪ್ಪ, ಕೆರೆಯಪ್ಪ, ಮಂಚಿ ಹೂವಪ್ಪ, ಪೀರ್ ಸಾಬ್, ರಾಕೇಶ್, ರಾಜೇಶ್,ರವಿ ಗುಡಿಗಾರ್, ಸಂಜೀವಾಚಾರಿ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.