ADVERTISEMENT

ರಕ್ಷಣೆ ನೀಡದಿದ್ದರೆ ಹೋರಾಟ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2017, 10:12 IST
Last Updated 6 ಏಪ್ರಿಲ್ 2017, 10:12 IST

ತುಮಕೂರು: ‘ನಗರದ ಕುರಿಪಾಳ್ಯ ಬಡಾವಣೆಯಲ್ಲಿ ದಲಿತ, ಪೌರಕಾರ್ಮಿಕ ಕುಟುಂಬದವರ ಮೇಲೆ ಮಾರ್ಚ್ 30ರಂದು ಹಲ್ಲೆಯಾಗಿದೆ. ಅವರಿಗೆ ಎಲ್ಲ ರೀತಿಯ ರಕ್ಷಣೆ ನೀಡಬೇಕು. ಕಾಯ್ದೆ ಅನುಸಾರ ಅವರಿಗೆ ಸೌಲಭ್ಯ ಕಲ್ಪಿಸಬೇಕು’ ಎಂದು ಬಿಜೆಪಿ  ಮುಖಂಡ ಎಸ್.ಶಿವಣ್ಣ ಒತ್ತಾಯ ಮಾಡಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಅನೇಕ ಮನೆಗಳಿಗೆ ಧಕ್ಕೆಯಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ವಿಚಕ್ರವಾಹನ ಜಖಂ ಆಗಿವೆ. ಇಷ್ಟೆಲ್ಲ ಆದರೂ ಸಂತ್ರಸ್ತರ ನೆರವಿಗೆ ಆಡಳಿತ ವರ್ಗ ಬಂದಿಲ್ಲ’ ಎಂದು ದೂರಿದರು.

‘ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿಲ್ಲ. ಮಹಾನಗರ ಪಾಲಿಕೆಯ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ನೊಂದವರ ಸಮಸ್ಯೆ ಆಲಿಸಿಲ್ಲ. ಜಿಲ್ಲಾಧಿಕಾರಿ, ಎಸ್ಪಿ ಭೇಟಿ ನೀಡಿದ್ದರೂ ಸಹ ಸಂತ್ರಸ್ತರಿಗೆ ಲಭಿಸಬೇಕಾದ ರಕ್ಷಣೆ, ಸೌಲಭ್ಯ ಇನ್ನು ದೊರಕಿಲ್ಲ. ಜಿಲ್ಲಾಡಳಿತದಲ್ಲಿ ಶಾಶ್ವತ ಅನುದಾನವಿದೆ. ಅದರಲ್ಲಿ ಸಹಾಯ ಮಾಡಬಹುದಿತ್ತು’ ಎಂದು ಹೇಳಿದರು.

ADVERTISEMENT

ಇಸ್ರೊಗೆ ಜಮೀನು ಸ್ವಾಗತಾರ್ಹ: ‘ಎಚ್ಎಂಟಿ ಜಮೀನು ಇಸ್ರೊಗೆ ಕೊಟ್ಟಿದ್ದು ಒಳ್ಳೆಯದಾಯಿತು. ಇದರಿಂದ ಜಾಗತಿಕ ಭೂಪಟದಲ್ಲಿ ತುಮಕೂರು ಅಜರಾಮರವಾಗಿರುತ್ತದೆ. ಅದೇ ರೀತಿ  ಎಚ್ಎಎಲ್, ಸ್ಮಾರ್ಟ್ ಸಿಟಿ, ಬೆಂಗಳೂರು– ಮುಂಬೈ, ಬೆಂಗಳೂರು –ಚೆನ್ನೈ ಕಾರಿಡಾರ್‌ ವ್ಯಾಪ್ತಿಗೆ ತುಮಕೂರು ಒಳಪಟ್ಟಿದೆ. ಇವೆಲ್ಲ  ಜಾಗತಿಕ ಮಟ್ಟದಲ್ಲಿ ತುಮಕೂರಿನ ಹೆಸರನ್ನು ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಸಮರ್ಪಕ ವಿದ್ಯುತ್ ಕಲ್ಪಿಸಲಿ: ‘ಬರಗಾಲ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ’ ಎಂದರು. ಕೆ.ಪಿ.ಮಹೇಶ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.