ADVERTISEMENT

‘ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ’

ಡಿವಿಎಸ್, ಶೋಭಾ ಆರೋಪಕ್ಕೆ ಕಾಂಗ್ರೆಸ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 9:00 IST
Last Updated 10 ಜುಲೈ 2017, 9:00 IST

ಉಳ್ಳಾಲ:  ಬಿ.ಸಿ.ರೋಡ್ ಗಲಭೆಗೆ ಸಚಿವ ರೈ ಹಾಗೂ ಖಾದರ್ ಅವರೇ ಹೊಣೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿ ರುವುದು ಖಂಡನೀಯ. ತಾಕತ್ತಿದ್ದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬಂದು ಆಣೆ ಪ್ರಮಾಣ ಮಾಡಿ ಹೇಳಲಿ. ಅಲ್ಲಿಗೆ ಇಬ್ಬರೂ ಸಚಿವರನ್ನು ನಾನು ಕರೆತರುವೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಸವಾಲು ಹಾಕಿದರು.

ತೊಕ್ಕೊಟ್ಟುವಿನಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಲಭೆಗೆ ಸಂಬಂಧಿಸಿ ಎಲ್ಲರಿಗೂ ನೋವಿದೆ. ಅಮಾಯಕ ಯುವಕರ ಕೊಲೆಯತ್ನ ನಡೆಯುತ್ತಿದ್ದು, ಇದನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದರು.

ಬ್ಲಾಕ್‌ನ ಸರ್ವಧರ್ಮದ ಕಾರ್ಯಕರ್ತರು ಸೇರಿ ಚಿರಂಜೀವಿ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದೇವೆ. ಕಾರ್ತಿಕ್ ಪ್ರಕರಣದಲ್ಲಿ  ಕಾಂಗ್ರೆಸ್ ವಿರುದ್ಧವೇ ಆರೋಪ ಮಾಡಿದ ಬಿಜೆಪಿಗೆ, ಆರೋಪಿಗಳ ಪತ್ತೆ ಬಳಿಕ ಮುಖಭಂಗವಾಗಿದೆ.

ADVERTISEMENT

ಇದೀಗ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿಯೂ ಸಚಿವರು ಭಾಗಿಯಾಗಿದ್ದಾರೆ ಎನ್ನುವ ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ದೂರಿದರು. ಕಾಂಗ್ರೆಸ್ ಪಕ್ಷ  ಮುಸ್ಲಿಂ ಮತ್ತು ಹಿಂದೂ ಮತೀಯವಾದವನ್ನು ಖಂಡಿಸುತ್ತದೆ. ಕೃತ್ಯಕ್ಕೆ ಕಾರಣರಾದ ವರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಆಗ್ರಹಿಸುತ್ತೇವೆ ಎಂದರು.

ತಾಲ್ಲೂಕು ಪಂಚಾಯಿತಿ  ಅಧ್ಯಕ್ಷ  ಮಹಮ್ಮದ್ ಮೋನು ಮಾತನಾಡಿ, ಜಿಲ್ಲೆಯಲ್ಲಿ ಹಿಂದು ಮುಸ್ಲಿಮರ ನಡುವೆ ನಡೆಯುತ್ತಿರುವ ಗಲಾಟೆಯಲ್ಲ. ಇದೊಂದು ಕೆಲ ಮತೀಯವಾದಿಗಳು ನಡೆಸುತ್ತಿರುವ ಗಲಾಟೆಯಾಗಿದೆ. ಸ್ವಲ್ಪ ಸಂಬಳಕ್ಕೆ ದುಡಿಯುವ ಅಮಾಯಕ ಯುವಕರಿಬ್ಬರ ಹತ್ಯೆಯಾಗಿದೆ. ಇದು ಕಳವಳಕಾರಿ. ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. 

ರೆಹಮಾನ್ ಕೋಡಿಜಾಲ್, ದೇವಕಿ, ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಎನ್.ಎಸ್.ಕರೀಂ, ಪದ್ಮನಾಭ ಗಟ್ಟಿ,  ಪದ್ಮನಾಭ ಮುಟ್ಟಿಂಜ, ಪುರುಷೋತ್ತಮ ಅಂಚನ್,  ಮುಸ್ತಾಫ ಹರೇಕಳ, ರಫೀಕ್ ಅಂಬ್ಲಮೊಗರು, ಶೌಕತ್ ಆಲಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ, ಸುನಿಲ್ ಪೂಜಾರಿ, ಪ್ರೇಮದಾಸ್ ಪೂಜಾರಿ, ರವಿಶಂಕರ್, ಆಲ್ವಿನ್ ಡಿಸೋಜ, ಮನೋಜ್ ಪೂಜಾರಿ, ಪಿಯೂಸ್ ಮೊಂತೇರೊ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.