ಉಡುಪಿ: ‘ಫಲಾಪೇಕ್ಷೆ ಇಲ್ಲದೆ ಸಮುದಾಯಕ್ಕೆ ಸಲ್ಲಿಸಿದ ಸೇವೆ ಸದುಪಯೋಗ ಆದಾಗ ದೊರೆಯುವ ತೃಪ್ತಿಯು ಸೇವಾಮಾರ್ಗದಲ್ಲಿ ಇನ್ನಷ್ಟು ಮುನ್ನಡೆಯಲು ಪ್ರೇರಣೆಯಾಗುತ್ತದೆ’ ಎಂದು ರೋಟರಿ ನಿಕಟ ಪೂರ್ವ ಜಿಲ್ಲಾ ಗವರ್ನರ್ ಡಿ.ಎಸ್. ರವಿ ತಿಳಿಸಿದರು.
ಮಣಿಪಾಲದಲ್ಲಿ ರೋಟರಿ ಉಡುಪಿ ಮತ್ತು ಮಣಿಪಾಲ ಟೌನ್ ಜಂಟಿ ಸಹಭಾಗಿತ್ವದಲ್ಲಿ ವಲಯ ನಾಲ್ಕು ಆಯೋಜಿಸಿದ ’ಸಂತೃಪ್ತಿ - ಸಾಧನೆ-ಧನ್ಯತೆಯ ಸಂತಸದ ಸಡಗರ’ದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ರೋಟರಿಯ ಪಂಚವಿಧ ಸೇವೆ, ಸದಸ್ಯತ್ವ ವೃದ್ಧಿ, ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವಿಕೆ, ಮನುಕುಲದ ದೇಗುಲ ರೋಟರಿ ಪ್ರತಿಷ್ಠಾನಕ್ಕೆ ನೀಡಿದ ಕೊಡುಗೆ ಇವೆಲ್ಲವೂ ವಲಯ ನಾಲ್ಕರ ಸಾಧನೆಯಾಗಿದೆ’ ಎಂದು ಹೇಳಿದರು.
‘ರೋಟರಿ ಜಿಲ್ಲೆ 3182 ಪ್ರಥಮ ವರ್ಷದಲ್ಲೇ ರೋಟರಿ ಗ್ಲೋಬಲ್ ಗ್ರ್ಯಾಂಟ್ ಮೂಲಕ 11 ವಿವಿಧ ಸಾಮಾಜಿಕ, ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ₹ 3.67 ಕೋಟಿಗಳಷ್ಟು ವ್ಯಯಿಸಿ ಶಾಶ್ವತ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ’ ಎಂದರು.
ಪಿಡಿಜಿ ಜ್ಞಾನ ವಸಂತ ಶೆಟ್ಟಿ ಮತ್ತು ಪಿಡಿಜಿ ಡಾ ಭರತೇಶ್ ಅದಿರಾಜ್, ಡಿಜಿಎನ್ ಬಿ.ಎನ್. ಸುರೇಶ, ರೊಟೇರಿಯನ್ ಜೈ ವಿಠಲ್, ಡಾ. ಸೇಸಪ್ಪ ರೈ, ಮುರಳಿ ಕಡೆಕಾರ್ ಹಾಗೂ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ,ಉಡುಪಿ ರೋಟರಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ, ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಮಡ್ಡೋಡಿ, ವಲಯ ಸೇನಾನಿಗಳಾದ ಸುರೇಶ್ ವಿ. ಬೀಡು, ಡಾ.ಜಿ.ಎಸ್.ಕೆ. ಭಟ್ ಹಾಗೂ ಜಗದೀಶ್ ಕಾಮತ್, ಡಾ.ಎನ್. ಉಡುಪ, ಕಾರ್ಯದರ್ಶಿ ರಾಜೇಶ ಪಣಿಯಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.