ಗೋಕರ್ಣ: ಗೋಕರ್ಣದ ಹುಳಸೇಕೇರಿ ಹಾಲಕ್ಕಿ ಒಕ್ಕಲಿಗರ ಕೇರಿಯಲ್ಲಿ ಮಳೆಗಾಗಿ ಇಂದ್ರನನ್ನು ಪ್ರಾರ್ಥಿಸಿ ಹೆಣ್ಣು, ಹೆಣ್ಣಿನ ನಡುವೆ ಮದುವೆ ನಡೆಯಿತು. ಇಬ್ಬರು ಮುತೈದೆಯರು ವಧು ವರರಾಗುವ ನಿಶ್ಚಯವು ಆಷಾಢ ಬಹುಳ ಏಕಾದಶಿಯಲ್ಲಿ ನಡೆಯುತ್ತದೆ. ಪ್ರತಿ ಕುಟುಂಬದ ಮಹಿಳೆಯೂ ಇದರಲ್ಲಿ ಭಾಗಿಯಾಗುವುದು ವಿಶೇಷ.\
ತಾರಮಕ್ಕಿಯ ಕೇದಿಗೆ ಗಣಪತಿ ಮತ್ತು ಕರಿದೇವರ ಸನ್ನಿಧಿಯಲ್ಲಿ ವಿವಾಹ ನಡೆಯುತ್ತದೆ. ಅಲ್ಲಿ ಹರಿಯುವ ಹಳ್ಳದ ಆಚೆ ಈಚೆ ವಧು ಮತ್ತು ವರನ ಕಡೆಯವರು ನಿಂತು ಹೆಣ್ಣು ಕೇಳುವ ಶಾಸ್ತ್ರ ಪೂರೈಸುತ್ತಾರೆ. ವಿವಾಹ ವಿಧಿಯ ಮಂತ್ರ ತಂತ್ರಗಳ ಬದಲಾಗಿ ಜಾನಪದ ಹಾಡುಗಳನ್ನು ಹಾಡುತ್ತಾರೆ.
ವಧು, ವರರನ್ನು ಹುಳಸೇಕೇರಿ ಗೌಡರ ಮನೆಗೆ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ, ಮುಖ್ಯ ಗೌಡರ ಸಮ್ಮುಖದಲ್ಲಿ ಧಾರೆ ಶಾಸ್ತ್ರ ನಡೆದು ವಧು ವರರಿಗೆ ಉಡುಗೂರೆ ಕೊಡಲಾಗುತ್ತದೆ. ಸಿಹಿ ಹಂಚಿಕೆ ಮತ್ತು ಪಾನೀಯ ವಿತರಣೆಯೊಂದಿಗೆ ದಾದುಮ್ಮನ ಮದುವೆ ಸಂಪನ್ನವಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.