ADVERTISEMENT

ವಿದ್ಯಾರ್ಥಿಗಳಿಗೆ ‘ಚಿಣ್ಣರ ವನ ದರ್ಶನ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 9:05 IST
Last Updated 20 ಡಿಸೆಂಬರ್ 2017, 9:05 IST

ಕಾರವಾರ: ಅಂಕೋಲಾ ತಾಲ್ಲೂಕಿನ ಅಲಗೇರಿ ಸರ್ಕಾರಿ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ‘ಚಿಣ್ಣರ ವನ ದರ್ಶನ’ ಕಾರ್ಯಕ್ರಮದಡಿ ಅರಣ್ಯ, ವನ್ಯಜೀವಿ ಸಂಪತ್ತಿನ ಕುರಿತು ಅರಿವು ಮೂಡಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಂಕೋಲಾ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ, ‘ವಿದ್ಯಾರ್ಥಿ ಜೀವನದಿಂದಲೇ ಅರಣ್ಯ, ವನ್ಯಜೀವಿಗಳ ಕುರಿತು ಅರಿವು ಇರಬೇಕು. ಅರಣ್ಯ ಇಲಾಖೆಯ ಮೂಲಕ ಹಮ್ಮಿಕೊಂಡಿರುವ ಚಿಣ್ಣರ ವನ ದರ್ಶನ ಅರ್ಥಪೂರ್ಣ ಕಾರ್ಯಕ್ರಮ’ ಎಂದು ಹೇಳಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈ ಅವರು ಅರಣ್ಯ ಇಲಾಖೆಯ ಕಾರ್ಯವೈಖರಿ, ಅರಣ್ಯ ಕಾನೂನು, ಪರಿಸರದ ಸಮತೋಲನಕ್ಕೆ ಅರಣ್ಯ ಹಾಗೂ ವನ್ಯಜೀವಿಗಳ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.

ADVERTISEMENT

ಮರಮುಟ್ಟು ಮಾಹಿತಿ: ಹಟ್ಟಿಕೇರಿ ಮರಮುಟ್ಟು ಸಂಗ್ರಹಾಲಯದಲ್ಲಿ ಉಪವಲಯ ಅರಣ್ಯಾಧಿಕಾರಿ ಅಂಜಲಿ ಅವರು ವಿವಿಧ ಬಗೆಯ ನಾಟಾ, ಜಲಾವು, ಹರಾಜು ಪ್ರಕ್ರಿಯೆ, ವಿಂಗಡಣೆ, ರಹದಾರಿ ಪರವಾನಗಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಆರ್.ಎಫ್.ಓ. ಜಿ.ಕೆ.ಶೇಟ್ ಅವರು ವಿದ್ಯಾರ್ಥಿಗಳಿಗೆ ಕ್ಯಾಪ್, ಬ್ಯಾಗ್ ವಿತರಿಸಿದರು. ನಂತರ ಹಾರವಾಡದ ಸಸ್ಯ ಪಾಲನಾ ಕ್ಷೇತ್ರದಲ್ಲಿ ವಲಯ ಅರಣ್ಯಾಧಿಕಾರಿ ಕೆ.ಡಿ. ನಾಯ್ಕ ಅವರು ಸಸ್ಯಪಾಲನಾ ಕ್ಷೇತ್ರದಲ್ಲಿ ಕೈಗೊಳ್ಳುವ ವಿವಿಧ ಕಾಮಗಾರಿ ಹಾಗೂ ಬೆಳೆಸಿದ ಸಸಿಗಳನ್ನು ಗುರುತಿಸುವುದರ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಬೀಜೋಪಚಾರ: ಹಟ್ಟಿಕೇರಿ ಉಪವಲಯ ಅರಣ್ಯಾಧಿಕಾರಿ ಸಂತೋಷ ಪವಾರ ಅವರು ವಿವಿಧ ಬಗೆಯ ಸಸಿ, ಬೀಜೋಪಚಾರ, ಗೊಬ್ಬರ ಇತ್ಯಾದಿಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ತದನಂತರ ಸಂಜೆ ಅಣಶಿ ಪ್ರಕೃತಿ ಶಿಬಿರಕ್ಕೆ ಭೇಟಿ ನೀಡಿ ಸುಗಮಗಾರರು ಹಾಗೂ ಸಂಪನ್ಮೂಲ ವ್ಯಕ್ತಿ ವಿರೇಂದ್ರ ಪವಾರ ಅವರು ವಿವಿಧ ಬಗೆಯ ಸರೀಸೃಪಗಳ ಕುರಿತು ಹಾಗೂ ಪ್ರಥಮ ಚಿಕಿತ್ಸೆ, ಪ್ರಮುಖ ನಾಲ್ಕು ಬಗೆಯ ಅತ್ಯಂತ ವಿಷಕಾರಿ ಸರೀಸೃಪಗಳನ್ನು ಗುರುತಿಸುವ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.

ಅರಣ್ಯ ರಕ್ಷಕ ಗೋಪಾಲ ನಾಯ್ಕ ಅವರು ಭಾರತ ದೇಶದಲ್ಲಿ ಹಾಗೂ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ವಿವಿಧ ಬಗೆಯ ಪಕ್ಷಿಗಳನ್ನು ಗುರುತಿಸುವಿಕೆ, ವಲಸೆ ಬರುವ ಪಕ್ಷಿಗಳು, ಗೂಡು, ಮೊಟ್ಟೆ, ಆಹಾರ ಸರಪಳಿ ಹಾಗೂ ಪರಾಗ ಸ್ಪರ್ಶದಲ್ಲಿ ಪಕ್ಷಿಗಳ ಪಾತ್ರ ಇತ್ಯಾದಿಗಳ ಕುರಿತು ವಿವರಿಸಿದರು. ಅರಣ್ಯ ಪ್ರದೇಶದಲ್ಲಿ ಚಾರಣ ಕೈಗೊಂಡು ವಿವಿಧ ಬಗೆಯ ಗಿಡ, ಮರ, ಬಳ್ಳಿ, ಔಷಧಿ ಸಸ್ಯ, ಹಳ್ಳದ ಅಂಚಿನಲ್ಲಿ ವಾಸಿಸುವ ಪಕ್ಷಿಗಳ ಕುರಿತು ಮಾಹಿತಿ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.