ADVERTISEMENT

ಸಮಾನತೆಗೆ ಶ್ರಮಿಸಿದ ವಚನ ರಕ್ಷಕ ಮಾಚಿದೇವ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 6:55 IST
Last Updated 3 ಫೆಬ್ರುವರಿ 2018, 6:55 IST

ಸಿದ್ದಾಪುರ: ‘ವಚನ ರಕ್ಷಕ ಮಡಿವಾಳ ಮಾಚಿದೇವರಂಥ ಮಹನೀಯರು ಜನ್ಮ ತಾಳದೇ ಇದ್ದಿದ್ದರೆ ನಾವು ಸಮಾನತೆಯನ್ನು ಕಾಣುತ್ತಿರಲಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಪಟ್ಟಣದಲ್ಲಿ ಗುರುವಾರ ನಡೆದ ವಚನ ರಕ್ಷಕ ಮಡಿವಾಳ ಮಾಚಿ ದೇವರ ಜಯಂತಿಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನಾವು ಅಭಿವೃದ್ಧಿ ಎಂಬ ಅಂಧಕಾರದಲ್ಲಿದ್ದೇವೆ. ಆದ್ದರಿಂದ ಮಹಾನ್ ಪುರುಷರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸುತ್ತಿದ್ದೇವೆ. ಮಾಚಿದೇವರು ಕೇವಲ ಮಡಿವಾಳರಿಗೆ ಮಾತ್ರ ಗುರು ಅಲ್ಲ; ಅವರು ಮನುಕುಲಕ್ಕೆ ಗುರು’ ಎಂದರು.

ADVERTISEMENT

ಅಸಮಧಾನ: ‘ಈ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಇಲ್ಲಿ ನಡೆಸುತ್ತಿರುವುದು ಉತ್ತಮ ವಿಚಾರ. ಆದರೆ ಇಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಯಾರೂ ಕೂಡ ಹಾಜರಾಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸನ್ಮಾನ: ಹಿರಿಯ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶರಾವ್ ಮತ್ತು ಗೃಹ ರಕ್ಷಕ ದಳದಲ್ಲಿ ಸಲ್ಲಿಸಿದ ಸೇವೆಗಾಗಿ ರಾಷ್ಟ್ರಪತಿ ಸೇವಾ ಪದಕ ಪಡೆದ ನಿವೃತ್ತ ಶಿಕ್ಷಕ ವಿನಾಯಕ ಬಿ.ಹೊಸೂರು ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮಡಿವಾಳ ಸಮಾಜದ ಪ್ರಮುಖ ಪಿ.ಬಿ.ಹೊಸೂರು ಮಾತನಾಡಿದರು. ಉಪ ತಹಶೀಲ್ದಾರ್ ಡಿ.ಆರ್.ಬೆಳ್ಳಿಮನೆ ಸ್ವಾಗತಿಸಿದರು. ವೆಂಕಟೇಶ ಮಡಿವಾಳ ಹಾಗೂ ಸುರೇಶ ಮಡಿವಾಳ ನಿರೂಪಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ಕೋಲಸಿರ್ಸಿ ಪಿಯು ಕಾಲೇಜಿನ ಪ್ರಾಂಶುಪಾಲ ಮಂಜಪ್ಪ ಎಂ.ಜಿ. ಉಪನ್ಯಾಸ ನೀಡಿದರು. ತಾಲ್ಲೂಕು ಪಂಚಾಯ್ತಿ ಇಒ ಶ್ರೀಧರ ಭಟ್, ತಹಶೀಲ್ದಾರ್ ಪಟ್ಟರಾಜ ಗೌಡ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.