ADVERTISEMENT

ಕಾಲುವೆಗೆ ನೀರು ಹರಿಯದೆ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 10:57 IST
Last Updated 15 ನವೆಂಬರ್ 2017, 10:57 IST
ಕೆಂಭಾವಿ ಸಮೀಪದ ಗುತ್ತಿ ಬಸವೇಶ್ವರ ಇಂಡಿ ಏತ ನೀರಾವರಿ ಜಾಕ್ವೆಲ್ ಪ್ರದೇಶದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು
ಕೆಂಭಾವಿ ಸಮೀಪದ ಗುತ್ತಿ ಬಸವೇಶ್ವರ ಇಂಡಿ ಏತ ನೀರಾವರಿ ಜಾಕ್ವೆಲ್ ಪ್ರದೇಶದಲ್ಲಿ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು   

ಕೆಂಭಾವಿ: ಗುತ್ತಿ ಬಸವೇಶ್ವರ ಇಂಡಿ ಏತ ನೀರಾವರಿಯ ನೀರೆತ್ತುವ ಮೋಟಾರ್‌ ಗಳು ಕೆಟ್ಟಿದ್ದು, ರೈತರ ಹೊಲಗಳಿಗೆ ನೀರು ಬಾರದೆ ಜನ ಪರದಾಡುವಂತಾಗಿದೆ. ಪೈರು ಬೆಳೆದು ನಿಂತಿರುವ ಸಮಯದಲ್ಲಿ ಮೋಟಾರ್‌ ಗಳು ಕೈಕೊಟ್ಟಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

ಒಟ್ಟು ಎಂಟು ಮೋಟಾರ್ ಗಳಲ್ಲಿ ಆರು ಮೋಟಾರ್ ಗಳು ಕೆಟ್ಟು ಹೋಗಿವೆ. ಕೇವಲ ಎರಡು ಮೋಟಾರ್ ಗಳಿಂದ ನೀರು ಬಿಡುತ್ತಿದ್ದು, ಸಮರ್ಪಕವಾಗಿ ರೈತರ ಜಮೀನಿಗೆ ನೀರು ಹರಿಯದೆ ರೈತರು ಕಂಗಾಲಾಗಿದ್ದಾರೆ.

ಈ ಏತ ನೀರಾವರಿ ಯೋಜನೆ ಅಡಿ 45 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕು, ವಿಜಯಪುರ ಜಿಲ್ಲೆಯ ಇಂಡಿ, ಸಿಂದಗಿ, ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಹುತೇಕ ಜಮೀನಿಗೆ ನೀರೊದಗಿಸುವ ಈ ಯೋಜನೆ ಆಗಾಗ ಕೈಕೊಡುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ADVERTISEMENT

‘ತೊಗರಿ, ಹತ್ತಿ, ಶೇಂಗಾ, ಭತ್ತ ಬೆಳೆಗಳಿಗೆ ನೀರಿನ ಅವಶ್ಯ­ಕತೆ­ ಇದ್ದು, ಕಾಲುವೆಗೆ ಸರಿಯಾಗಿ ನೀರು ಬಿಡದೆ ಇರುವುದರಿಂದ ತೊಂದರೆ­ಯಾಗುತ್ತಿದೆ. ಸದ್ಯ ವಾರಬಂದಿ ಮೂಲಕ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಅದರಲ್ಲಿ ಮೋಟಾರ್ ಗಳು ಕೆಟ್ಟು ವಾರಗಟ್ಟಲೆ ನೀರಿಲ್ಲವೆಂದರೆ ಬೆಳೆಗಳು ಒಣಗಿ ಹೋಗುತ್ತವೆ’ ಎನ್ನುತ್ತಾರೆ ರೈತ ಮಲ್ಲನಗೌಡ ಪಾಟೀಲ.

ಕಳೆದ ಮೂರು ವರ್ಷಗಳಿಂದ ಕೆಟ್ಟು ನಿಂತಿರುವ ಮೂರು ಮೋಟಾರ್ ದುರಸ್ತಿ ಮಾಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ದ್ದಾರೆ.   ಮೋಟಾರ್‌ ಗಳನ್ನು ಶೀಘ್ರ ಸರಿಪಡಿಸಿ ರೈತರಿಗೆ ನೀರು ಒದಗಿಸ­ಬೇಕು’ ಎಂದು ಶ್ರೀನಿವಾಸ ಪಾಟೀಲ ಒತ್ತಾಯಿಸಿ­ದ್ದಾರೆ.

ಪ್ರತಿಭಟನೆ: ಮೋಟಾರ್ ಗಳನ್ನು ದುರಸ್ತಿಗೊಳಿಸಿ ಕಾಲುವೆಗೆ ಸಮರ್ಪಕವಾಗಿ ನೀರು ಹರಿಸುವಂತೆ ಒತ್ತಾಯಿಸಿ ಯಾಳಗಿ ಮತ್ತು ಹದನೂರು ಗ್ರಾಮಸ್ಥರು ಮಂಗಳವಾರ ಗುತ್ತಿ ಬಸವೇಶ್ವರ ಇಂಡಿ ಏತ ನೀರಾವರಿ ಜಾಕ್ ವೆಲ್ ಪ್ರದೇಶದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿದರು.

ಚನ್ನಪ್ಪಗೌಡ ಬೀರಾದಾರ, ಮಲ್ಲನಗೌಡ ಮಾಲಿ ಪಾಟೀಲ, ಗೌಡಪ್ಪಗೌಡ ಹೊಸಮನಿ, ಚಂದ್ರಶೇಖರ ಬಿಳವಾರ, ನಿಂಗನಗೌಡ ಹೊಸಮನಿ, ಶಿವಾನಂದ, ಜಗನ್ನಾಥ ರಡ್ಡಿ, ನಾಗರಡ್ಡಿಗೌಡ, ಶಂಕರಗೌಡ ದಾನರಡ್ಡಿ, ರಾಮನಗೌಡ ಹೊಸಮನಿ, ಶ್ರೀನಿವಾಸಗೌಡ ಪೊಲೀಸ್ ಪಾಟೀಲ, ಬಸನಗೌಡ ಡವಳಗಿ ಇದ್ದರು.

* * 

ಮೋಟಾರ್ ಕೆಲಸ ಮಾಡುತ್ತಿದ್ದು ಬುಧವಾರ ರಾತ್ರಿಯಿಂದ ಇನ್ನೊಂದು ಮೊಟಾರ ಪ್ರಾರಂಭಿಸಲಾಗುವುದು.
ಎಸ್.ಎಮ್ ಧನವಾಡಕರ್
ಇಇ ಕೃಷ್ಣಾ ಭಾಗ್ಯ ಜಲ ನಿಗಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.