ADVERTISEMENT

ಮೂರನೇ ಹಂತದ ಮತದಾನ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2014, 14:31 IST
Last Updated 10 ಏಪ್ರಿಲ್ 2014, 14:31 IST

ನವದೆಹಲಿ (ಪಿಟಿಐ): ದೆಹಲಿ, ಕೇರಳ, ಉತ್ತರ ಪ್ರದೇಶ ಸೇರಿದಂತೆ 11 ರಾಜ್ಯ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ 92 ಕ್ಷೇತ್ರಗಳಿಗೆ ಗುರುವಾರ ಬೆಳಿಗ್ಗೆಯಿಂದ ಆರಂಭಗೊಂಡಿದ್ದ ಮೂರನೇ ಹಂತದ ಮತದಾನವು ಕೆಲ ಹಿಂಸಾಚಾರಗಳ ಮಧ್ಯ ಶಾಂತಿಯುತವಾಗಿ ಕೊನೆಗೊಂಡಿದೆ.

ಇವರೆಗೆ ಲಭ್ಯವಾದ ಚುನಾವಣಾ ಆಯೋಗದ ಮಾಹಿತಿಗಳ ಪ್ರಕಾರ ದೆಹಲಿಯಲ್ಲಿ ಶೇ.64ರಷ್ಟು ಮತದಾನವಾಗಿದೆ. ಉತ್ತರಪ್ರದೇಶ ಶೇ.65, ಜಮ್ಮು ಶೇ.66.29, ಕೆರಳ ಶೇ.74, ಹರಿಯಾಣ ಶೇ.73, ಛತ್ತೀಸ್‌ಗಡ ಶೇ.72ರಷ್ಟು ಮತದಾರರು ಮತ ಚಲಾಯಿಸಿದ್ದಾರೆ.

ನಕ್ಸಲ್ ದಾಳಿಗಳು: ನಕ್ಸಲ್‌ರು ಜಾರ್ಖಂಡ್‌ನಲ್ಲಿ ಮತದಾನ ಆರಂಭಕ್ಕೂ ಮುನ್ನ ಸರಣಿ ನೆಲಬಾಂಬ್ ಸ್ಫೋಟಿಸಿ, ಭದ್ರತಾ ಸಿಬ್ಬಂದಿಗಳ ಜತೆ ಗುಂಡಿನ ಚಕಮಕಿ ನಡೆಸಿದ ಘಟನೆ ವರದಿಯಾಗಿದ್ದು, ಪಟ್ನಾದ ಮುಂಗರ್‍ ಜಿಲ್ಲೆಯಲ್ಲಿ ನಕ್ಸಲ್‌ರು ಹುದುಗಿಸಿಟ್ಟಿದ್ದ ನೆಲಬಾಂಬ್‌ಗೆ ಚುನಾವಣಾ ಭದ್ರತೆಯಲ್ಲಿ ತೊಡಗಿದ್ದ ಇಬ್ಬರು ಸಿಆರ್‌ಪಿಎಫ್ ಯೋಧರು ಬಲಿಯಾದ ಹಿನ್ನೆಲೆಯಲ್ಲಿ ಜಮುಯಿ ಜಿಲ್ಲಾಡಳಿತವು 12 ಮತಗಟ್ಟೆಗಳಲ್ಲಿನ ಮತದಾನವನ್ನು ರದ್ದುಗೊಳಿಸಿದೆ.

ADVERTISEMENT

ಈ ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 11 ಕೋಟಿ ಅರ್ಹ ಮತದಾರರಿದ್ದು, 1419 ಅಭ್ಯರ್ಥಿಗಳು ಕಣದಲ್ಲಿದ್ದಾರೆ.  ಪ್ರಮುಖರಾದ ಲೋಕಸಭಾ ಸ್ಪೀಕರ್‌ ಮೀರಾ ಕುಮಾರ್‌, ಕಪಿಲ್‌ ಸಿಬಲ್‌, ಕಮಲ್‌ನಾಥ್‌, ಅಜಯ್‌ ಮಾಕನ್‌, ನವೀನ್‌ ಜಿಂದಾಲ್‌, ದೀಪೇಂದರ್‌  ಹೂಡಾ (ಕಾಂಗ್ರೆಸ್‌), ಅಜಿತ್‌ ಸಿಂಗ್‌ (ಆರ್‌ಎಲ್‌ಡಿ), ಭೂಸೇನೆಯ ನಿವೃತ್ತ ಮುಖ್ಯಸ್ಥ ವಿ.ಕೆ. ಸಿಂಗ್‌ ಮತ್ತು ಹರ್ಷವರ್ಧನ್‌,  ಮೀನಾಕ್ಷಿ ಲೇಖಿ (ಬಿಜೆಪಿ), ಸಿನಿಮಾ ತಾರೆ­ಯರಾದ ಜಯಪ್ರದಾ (ಆರ್‌ಎಲ್‌ಡಿ), ನಗ್ಮಾ ಮತ್ತು ರಾಜ್‌ಬಬ್ಬರ್‌ (ಕಾಂಗ್ರೆಸ್‌), ಕಿರಣ್‌ ಖೇರ್‌ (ಬಿಜೆಪಿ), ಗುಲ್‌ ಪಾಂಗ್‌ (ಎಎಪಿ) ಅವರ ರಾಜಕೀಯ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.